ದೊಡ್ಡಬಳ್ಳಾಪುರ:ಸಂವಿಧಾನ ಜಾರಿಯಾಗಿ 73 ವರ್ಷ ಕಳೆದಿದ್ದರೂ ಅಂಬೇಡ್ಕರ್ ಅವರ ಆಶಯದಂತೆ ಸಂಪೂರ್ಣವಾಗಿ ಸಂವಿಧಾನ ಇಲ್ಲಿಯವರೆಗೂ ಜಾರಿಯಾಗಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ. ವೆಂಕಟೇಶ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ಮಂಗಳವಾರ ಬಿಎಸ್ಪಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ಸುತ್ತೋಲೆ ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಅಸ್ಪೃಶ್ಯತೆ, ನಿರುದ್ಯೋಗ, ಬಡತನ ನಿರ್ಮೂಲನೆಯಂತಹ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಇಲ್ಲಿಯವರೆಗೂ ಆಡಳಿತ ನಡೆಸಿರುವ ಯಾರೊಬ್ಬರು ಜಾರಿಗೆ ತಂದಿಲ್ಲ ಎಂದು ಟೀಕಿಸಿದರು.
ಅಂಬೇಡ್ಕರ್ ರಚಿಸಿಕೊಟ್ಟಿರುವ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡುವಲ್ಲಿ ವಿಫಲವಾಗಿರುವುರಿಂದ ದೇಶದಲ್ಲಿ ಬಡವರು ಇನ್ನೂ ಬಡವರಾಗಿಯೇ ಉಳಿಯುವಂತಾಗಿದೆ. ಸಮಾತೆಯ ಭರವಸೆಗಳು ಭಾಷಣಕ್ಕೆ ಮಾತ್ರವೇ ಸೀಮಿತವಾಗಿವೆ. ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸಲು ಸಾಧ್ಯವಾಗದವರು ಅದರಲ್ಲಿ ಹುಳುಕು ಹುಡುಕಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಮಹದೇವ್, ಜಿಲ್ಲಾ ಸಂಯೋಜಕ ಎಚ್. ನರಸಿಂಹಯ್ಯ, ತಾಲ್ಲೂಕು ಅಧ್ಯಕ್ಷ ವಿ. ನಂಜೇಶ್ ಹಾಜರಿದ್ದರು.