ಆನೇಕಲ್ : ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ತಾಲ್ಲೂಕಿನಾದ್ಯಂತ 50 ಸಾವಿರಕ್ಕೂ ಹೆಚ್ಚು ಆಹಾರದ ಕಿಟ್ಗಳನ್ನು ವಿತರಿಸಲಾಗಿದೆ. ಸಂಕಷ್ಟದ ಸಮಯದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.
ಕರ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲ್ದೇನಹಳ್ಳಿಯಲ್ಲಿ ಆಹಾರದ ಕಿಟ್ ವಿತರಿಸಿ ಮಾತನಾಡಿದರು.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಹಲವಾರು ಸಂಘ ಸಂಸ್ಥೆಗಳು ಆಹಾರದ ಕಿಟ್ ನೀಡುವ ಮೂಲಕ ನೆರವಾಗಿವೆ. ಕರ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಒಟ್ಟು 2,000 ಆಹಾರ ಕಿಟ್ ವಿತರಿಸಲಾಗಿದೆ ಎಂದರು.
ಕೊರೊನಾದೊಂದಿಗೆ ಬದಕುವುದು ಅನಿವಾರ್ಯ. ಹಾಗಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಂಡು ಕೃಷಿ ಚಟುವಟಿಕೆ ಆರಂಭಿಸಬೇಕು. ನರೇಗಾ ಯೋಜನೆಯಡಿ ಉದ್ಯೋಗ ನೀಡಲಾಗುತ್ತಿದ್ದು, ರೈತರು ತಮ್ಮ ಹೊಲ–ತೋಟಗಳಲ್ಲಿ ಇಂಗು ಗುಂಡಿ, ಬದು ನಿರ್ಮಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಪಿ.ರಮೇಶ್ ಮಾತನಾಡಿ, ಲಾಕ್ಡೌನ್ನಿಂದಾಗಿ ಉದ್ಯೋಗ ಅವಕಾಶಗಳು ಕಡಿಮೆಯಾಗಿವೆ. ಹಾಗಾಗಿ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಅಮೆಜಾನ್ ಸಿಎಸ್ಆರ್ ವತಿಯಿಂದ ಮಾಯಸಂದ್ರ, ಕರ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಕುಟುಂಬಕ್ಕೆ 1,600 ಆಹಾರದ ಕಿಟ್, 2,000 ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸರಸಮ್ಮ, ಉಪಾಧ್ಯಕ್ಷೆ ನಂಜಮ್ಮ, ಪುರಸಭಾ ಸದಸ್ಯ ಎನ್.ಎಸ್.ಪದ್ಮನಾಭ್, ಮುಖಂಡರಾದ ಬಸವರಾಜು, ಅಂಬರೀಷ್, ಸುನೀಲ್, ಯಲ್ಲಪ್ಪ, ಕುಮಾರ್ಗೌಡ, ಉಲ್ಲಾಸ್, ನಾರಾಯಣಪ್ಪ, ವೆಂಕಟೇಶಪ್ಪ, ದಿನೇಶ್, ಅಮೆಜಾನ್ ಸಿಎಸ್ಆರ್ನ ಸಿದ್ದರಾಜು ಹಾಜರಿದ್ದರು.