ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ’

ವಿಜಯಪುರದಲ್ಲಿ ನೀಲಗಿರೀಶ್ವರಸ್ವಾಮಿ ಶಾಲೆಯ ಅಧ್ಯಕ್ಷ ಸಿ.ಎಂ. ವೀರಣ್ಣ
Last Updated 4 ಜೂನ್ 2019, 14:34 IST
ಅಕ್ಷರ ಗಾತ್ರ

ವಿಜಯಪುರ: ಪರಿಸರ ಸಂರಕ್ಷಣೆಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದು ನೀಲಗಿರೀಶ್ವರಸ್ವಾಮಿ ಶಾಲೆಯ ಅಧ್ಯಕ್ಷ ಸಿ.ಎಂ. ವೀರಣ್ಣ ಹೇಳಿದರು.

ಇಲ್ಲಿನ ಗುರಪ್ಪನಮಠದ ಓಂಕಾರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

‘ಬೆಳೆಯುತ್ತಿರುವ ವಿಜ್ಞಾನ-ತಂತ್ರಜ್ಞಾನದಿಂದಾಗಿ ಪರಿಸರದಿಂದ ನಾವು ದೂರವಾಗುತ್ತಿದ್ದೇವೆ. ಈಚೆಗಿನ ವರ್ಷಗಳಲ್ಲಿ ಮಕ್ಕಳು ಪರಿಸರದಿಂದ ದೂರವಾಗುತ್ತಿದ್ದಾರೆ’ ಎಂದರು.

ಕೆಲ ವರ್ಷಗಳ ಹಿಂದೆ ಮಕ್ಕಳು ಪರಿಸರದೊಂದಿಗೆ ಆಟವಾಡುತ್ತ ಬೆಳೆಯುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಜೊತೆ ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಮಕ್ಕಳು ಪರಿಸರ ಸ್ನೇಹಿಯಾಗಿ ಬೆಳೆಯಬೇಕು. ಆದರೆ ಶಿಕ್ಷಣ ಹೆಚ್ಚುತ್ತ ಹೋದಂತೆ ಪರಿಸರದಿಂದ ದೂರವಾಗುತ್ತಿದ್ದಾರೆ. ಬದಲಾಗುತ್ತಿರುವ ಮಾನವನ ಜೀವನಶೈಲಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಣುಶಕ್ತಿ ಪರೀಕ್ಷೆ, ಜನಸಂಖ್ಯಾ ಸ್ಫೋಟ, ಹೆಚ್ಚುತ್ತಿರುವ ಕೈಗಾರಿಕೆಗಳು, ಅರಣ್ಯ ನಾಶದಿಂದ ಪ್ರಕೃತಿ ವಿಕೋಪ ಹೆಚ್ಚುತ್ತಿವೆ ಎಂದು ವಿಷಾದಿಸಿದರು.

ಪರಿಸರ ರಕ್ಷಣೆ ಸಮಾಜ ಸೇವೆಯಲ್ಲ. ಬದಲಾಗಿ ಪ್ರತಿಯೊಬ್ಬರ ಜವಾಬ್ದಾರಿ. ಪರಿಸರ ಮನುಷ್ಯರಿಗಾಗಿ ಮಾತ್ರ ಇಲ್ಲ. ಪ್ರತಿ ಜೀವಿಗಳಿಗೂ ಪರಿಸರದ ಮೇಲೆ ಹಕ್ಕಿದೆ. ಮರ, ಗಿಡಗಳನ್ನು ಸಂರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ. ಮರಗಳನ್ನು ಬೆಳೆಸುವುದರಿಂದ ರೋಗಗಳು ದೂರವಾಗುತ್ತವೆ ಎಂದರು.

ಕಾರ್ಯದರ್ಶಿ ಎ.ವಿ.ಎಂ. ನಾಗರಾಜು ಮಾತನಾಡಿ, ‘ಮನುಷ್ಯ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ನಡೆಯಲಿದೆ’ ಎಂದರು.

‘ಇದು ನಡೆಯಬಾರದೆಂದರೆ ಇಂದಿನಿಂದಲೇ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ಇದನ್ನೇ ಮಕ್ಕಳಿಗೆ ಹೇಳಿಕೊಡಬೇಕಾಗಿದೆ. ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅವಶ್ಯಕತೆ ಇಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ’ ಎಂದರು.

ಸಸಿಗಳನ್ನು ಬೆಳೆಸಿ ಪರಿಸರವನ್ನು ಉಳಿಸಿ..ಹಸಿರೇ ಉಸಿರು..ಗಿಡಮರಗಳನ್ನು ಕಡಿಯಬೇಡಿ..ಸಸಿಗಳನ್ನು ಮಕ್ಕಳಂತೆ ಪೋಷಿಸಿ ಎನ್ನುವ ಘೋಷಣೆಗಳೊಂದಿಗೆ ಶಾಲಾ ಮಕ್ಕಳು ಜಾಥಾ ಕಾರ್ಯಕ್ರಮ ನಡೆಸಿದರು.

ಕೈಗಳಲ್ಲಿ ಸಸಿಗಳನ್ನು ಹಿಡಿದು ಮೆರವಣಿಗೆ ಮಾಡಿದರು. ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ, ಪರಿಸರ ಸಂರಕ್ಷಣೆಯ ಕುರಿತು ಜನರಿಗೆ ಜಾಗೃತಿ ಮೂಡಿಸಲು ಬೀದಿನಾಟಕ ಮಾಡಿದರು.

8ನೇ ತರಗತಿ ವಿದ್ಯಾರ್ಥಿನಿ ಕೃತಿಕಾ ಹಾಗೂ 9ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಪರಿಸರ ನಾಶದಿಂದ ಆಗುತ್ತಿರುವ ದುಷ್ಪರಿಣಾಮಗಳು, ಪರಿಸರ ಮಾಲಿನ್ಯವಾಗುತ್ತಿರುವ ಬಗೆ, ಮಾಲಿನ್ಯ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಒಕ್ಕಲಿಗರ ಸಂಘದ ಅಧ್ಯಕ್ಷ ತೋಟದಪ್ಪ, ಖಜಾಂಚಿ ನಾರಾಯಣಸ್ವಾಮಿ, ಗೋಪಾಲಪ್ಪ, ಹನುಮಂತಪ್ಪ, ಶಾಲಾ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT