ವಿಜಯಪುರ: ಮಧುಮೇಹ ಮಾತ್ರೆಗಳ ಸೇವನೆಯಿಂದ ಆರೋಗ್ಯ ಹದಗೆಟ್ಟಿದೆ ಎಂದು ಇಲ್ಲಿನ ನಿವಾಸಿ ಕೃಷ್ಣಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಂದಿ ಮೆಡಿಕಲ್ ಸ್ಟೋರ್ನಲ್ಲಿ 5ವರ್ಷಗಳಿಂದ ಮಧಮೇಹಕ್ಕಾಗಿ (ಡಯಾಪ್ರೈಡ್ ಎಂ.2 ಪೋರ್ಟ್) ಮಾತ್ರೆ ಖರೀದಿಸಿ ಕೃಷ್ಣಪ್ಪ ಸೇವನೆ ಮಾಡುತ್ತಿದ್ದರು. ‘15 ದಿನಗಳ ಹಿಂದೆಯೂ ಇದೇ ಮಾತ್ರೆ ಖರೀದಿಸಿ ಸೇವನೆ ಮಾಡಿದ್ದೇನೆ. ಒಂದು ವಾರದಿಂದ ಅನಾರೋಗ್ಯ ಕಾಡುತ್ತಿದೆ. ಈ ಮಾತ್ರೆಗಳನ್ನು ನೀರಿನಲ್ಲಿ ಹಾಕಿದರೂ ಕರಗುತ್ತಿಲ್ಲ. ಈ ಮಾತ್ರೆಗಳು ನಕಲಿಯೇ ಅಥವಾ ಅಸಲಿಯೇ ಎನ್ನುವ ಬಗ್ಗೆ ವಿಚಾರಿಸಿ ಕ್ರಮಕೈಗೊಳ್ಳಬೇಕೆಂದು’ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ವಿಜಯಪುರ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್.ಹರೀಶ್ ಮಾತನಾಡಿ, ಜನರಿಗೆ ಅನುಕೂಲವಾಗಬೇಕೆಂದು ಮೆಡಿಕಲ್ ಸ್ಟೋರ್ ಇಡಲಾಗಿದೆಯೇ ಹೊರತು, ತೊಂದರೆ ನೀಡುವ ಉದ್ದೇಶದಿಂದ ಅಲ್ಲ ಎಂದು ಸ್ಪಷ್ಟನೆ ನೀಡಿದರು.
ನಂದಿ ಮೆಡಿಕಲ್ ಸ್ಟೋರ್ ಮಾಲೀಕ ಎ.ಎನ್.ಹರೀಶ್ ಮಾತನಾಡಿ, ‘ನಾವು ಮಾತ್ರೆ ತಯಾರು ಮಾಡುವುದಿಲ್ಲ. ಕಂಪನಿಯಿಂದ ಬಂದದ್ದನ್ನು ಗ್ರಾಹಕರಿಗೆ ಮಾರಾಟ ಮಾಡುತ್ತೇವೆ. ಗ್ರಾಹಕರಿಗೆ ಅನಾರೋಗ್ಯ ಉಂಟಾಗಿರುವುದಕ್ಕೂ ನಮಗೂ ಸಂಬಂಧವಿಲ್ಲ’ ಎಂದರು.
ಔಷಧ ನಿಯಂತ್ರಣ ಅಧಿಕಾರಿ ಮಾತನಾಡಿ, ಮೆಡಿಕಲ್ ಸ್ಟೋರ್ನಲ್ಲಿರುವ ಮಾತ್ರೆಗಳು, ಖರೀದಿ ಮಾಡಿರುವ ರಸೀದಿ ಪರಿಶೀಲನೆ ನಡೆಸಲಾಗಿದೆ. ಲ್ಯಾಬ್ ಪರೀಕ್ಷೆಗಾಗಿ ಮಾತ್ರೆಗಳನ್ನು ಸಂಗ್ರಹ ಮಾಡಲಾಗಿದೆ ಎಂದರು.