ಹೊಸಕೋಟೆ: ತಾಲ್ಲೂಕಿನ ನಿಂಬೇಕಾಯಿಪುರ ಗ್ರಾಮದ ಬಳಿ ಇರುವ ಜನಪದರು ಸಾಂಸ್ಕೃತಿಕ ವೇದಿಕೆಯಲ್ಲಿ ಆಯೋಜಿಸಿದ್ದ 2023ರ ಶಿವಸಂಚಾರ ಸಾಣೆಹಳ್ಳಿಯ ಮೂರು ದಿನಗಳ ನಾಟಕೋತ್ಸವಕ್ಕೆ ಗುರುವಾರ ತೆರೆಬಿದ್ದಿತು.
ಸಮಾರಂಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ವಿ.ವೆಂಕಟರಮಣಪ್ಪ ಅವರು, `ನಿರಂತರ ಬದಲಾವಣೆಯ ಈ ಜಗದ ನಿಯಮ. ಈ ಬದಲಾವಣೆಯಲ್ಲಿ ಸಾಂಸ್ಕೃತಿಕ ಚಳುವಳಿ ಪ್ರಮುಖ ಪಾತ್ರ ವಹಿಸಿದೆ. ಇದರ ಅಂಗವಾಗಿ ಸಾಣೆಹಳ್ಳಿ ಶಿವಸಂಚಾರ ನಾಟಕೋತ್ಸವ ನಡೆಸುತ್ತಿದೆ ಎಂದರು.
ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆಗೆ ಕಾರಣಕರ್ತರಾದ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಅಂಬೇಡ್ಕರ್ ಅವರು ಎಂದೆಂದಿಗೂ ದೇಶಕ್ಕೆ ಅನಿವಾರ್ಯವಾಗುತ್ತಾರೆ. ಅವರ ಮೂಲಕವೇ ಈ ದೇಶ ಸಮಾನತೆಯಿಂದ ಉಸಿರಾಡುವ ಸಾಧ್ಯ. ಆದ್ದರಿಂದ ಇವರ ಸಿದ್ಧಾಂತ ಎಲ್ಲೆಡೆ ಪಸರಿಸುವ ಅಗತ್ಯವಿದೆ ಎಂದು ಹೇಳಿದರು.
ಮೂರು ದಿನಗಳ ನಾಟಕೋತ್ಸವದಲ್ಲಿ ಜಯಂತ್ ಕಾಯ್ಕಿಣಿ ಅವರ ರಚನೆಯ ಹುಲುಗಪ್ಪ ಕಟ್ಟೀಮನಿ ಅವರ ನಿರ್ದೇಶನದ ‘ಜೊತೆಗಿರುವನು ಚಂದಿರ’, ಎರಡನೇ ದಿನದ ನಾಟಕವಾಗಿ ಕೆ.ಎನ್.ಸಾಳುಂಕೆ ರಚನೆಯ ಮಾಲತೇಶ ಬಡಿಗೇರ ನಿರ್ದೇಶನದ ‘ತಾಳಿಯ ತಕರಾರು’ ಮತ್ತು ಮೂರನೆ ಮತ್ತು ಕೊನೆಯ ನಾಟಕವಾಗಿ ನಟರಾಜ್ ಬೂದಾಳ್ ಅವರ ‘ಕಲ್ಯಾಣದ ಬಾಗಿಲು’ ನಾಟಕ ಸಿ.ಬಸವಲಿಂಗಯ್ಯ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.
ರಂಗಭೂಮಿ ಕಲಾವಿದರು ಮತ್ತು ನಿರ್ದೇಶಕರನ್ನು ಸನ್ಮಾನಿಸಲಾಯಿತು. ನಾಟಕದ ಬಗ್ಗೆ ಹಿರಿಯ ಪ್ರೇಕ್ಷಕರು ವಿಮೆರ್ಶೆಯ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡರು.