ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌: ರಾಗಿಯ ಕಣಜದಲ್ಲಿ ರಾಗಗಳ ಹಬ್ಬ

ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನಕ್ಕೆ ಚಾಲನೆ
Last Updated 11 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಆನೇಕಲ್: ಕರ್ನಾಟಕ ಸುಗಮ ಸಂಗೀತ ಪರಿಷತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆನೇಕಲ್‌ನಲ್ಲಿ ಹಮ್ಮಿಕೊಂಡಿರುವ ಎರಡು ದಿನದ ರಾಜ್ಯ ಮಟ್ಟದ 18ನೇ ಸುಗಮ ಸಂಗೀತ ಸಮ್ಮೇಳನಕ್ಕೆ ಶನಿವಾರ ಚಾಲನೆ ದೊರೆಯಿತು.

ಸಮ್ಮೇಳನಾಧ್ಯಕ್ಷ ಮ್ಯಾಂಡೋಲಿನ್‌ ವಾದಕ ಎನ್‌.ಎಸ್.ಪ್ರಸಾದ್‌ ಅವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರೋಟದಲ್ಲಿ ಮೆರವಣಿಗೆ ಮಾಡ ಲಾಯಿತು. ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ಗಾಯಕಿ ರತ್ನಮಾಲ ಪ್ರಕಾಶ್, ಕಿಕ್ಕೇರಿ ಕೃಷ್ಣಮೂರ್ತಿ, ನಗರ ಶ್ರೀನಿವಾಸ ಉಡುಪ ಮುಂತಾದವರ ಸುಗಮ ಸಂಗೀತ ಮತ್ತು ಸ್ಥಳೀಯರಿಂದ ಶತಕೋಟಿ ಕಂಠ ಗಾಯನದಿಂದ ರಾಗಗಳ ಹಬ್ಬ ಮೇಳೈಸಿತ್ತು. ಒಂದೇ ವೇದಿಕೆಯಲ್ಲಿ ಹಲವು ಗಾಯಕರ ಗಾಯನ ಕೇಳಿ ಜನರು ತಲೆದೂಗಿದರು.

ಸಮ್ಮೇಳನ ಉದ್ಘಾಟಿಸಿದ ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಮಾತನಾಡಿ, ಜನರನ್ನು ಒಗ್ಗೂಡಿಸುವ ಶಕ್ತಿ ಸುಗಮ ಸಂಗೀತಕ್ಕಿದೆ. ಕವಿಯ ಕವನಗಳನ್ನು ಜನಪ್ರಿಯಗೊಳಿಸಿದ ಕೀರ್ತಿ ಸುಗಮ ಸಂಗೀತಕ್ಕೆ ಸಲ್ಲಬೇಕು. ಸಾಹಿತ್ಯ, ಸುಗಮ ಸಂಗೀತ ಅವಿನಾಭಾವ ಸಂಬಂಧ ಹೊಂದಿವೆ ಎಂದರು.

ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ಕಾರ ಹಣ ನೀಡಲು ಮೀನಮೇಷ ಎಣಿಸುತ್ತಿರುವುದು ವಿಷಾದನೀಯ. ಸಂಗೀತ ಸಮ್ಮೇಳನಗಳಿಗೆ ಹಣ ಬಿಡುಗಡೆ ಮಾಡುವುದು ಸರ್ಕಾರದ ಕರ್ತವ್ಯ. ಸಮ್ಮೇಳನಗಳಿಗಾಗಿ ಸರ್ಕಾರದ ಬಳಿ ಭಿಕ್ಷೆ ಬೇಡುವಂತಾಗಾಬಾರದು ಎಂದು ಕವಿ ಬಿ.ಆರ್‌.ಲಕ್ಷ್ಮಣರಾವ್ ಸಲಹೆ ಮಾಡಿದರು.

ಸುಗಮ ಸಂಗೀತ ಶಾಲೆ, ಕಾಲೇಜು ಗಳಲ್ಲಿ ಪಠ್ಯದಲ್ಲಿ ಸೇರ್ಪಡೆಯಾಗಬೇಕು. ಸುಗಮ ಸಂಗೀತ ಮನರಂಜನೆಗಲ್ಲ, ಜನರ ಭಾವನೆಗಳ ಮೇಳವಾಗಿದೆ. ಹಾಗಾಗಿ ಸುಗಮ ಸಂಗೀತಕ್ಕೆ ಸರ್ಕಾರ ಹೆಚ್ಚಿನ ಪ್ರಾಶಾಸ್ತ್ಯ ಕೊಡಬೇಕು. ಈ ನಿಟ್ಟಿನಲ್ಲಿ ಸಾಹಿತಿ, ಗಾಯಕರು, ಕಲಾವಿದರು ದನಿ ಎತ್ತಬೇಕು ಎಂದರು.

ಸಮ್ಮೇಳನಾಧ್ಯಕ್ಷ ಎನ್.ಎಸ್.ಪ್ರಸಾದ್‌ ಮಾತನಾಡಿ, ಕವಿ ಮನದ ಭಾವವನ್ನು ಸುಗಮ ಸಂಗೀತ ಸಮರ್ಥವಾಗಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಸುಗಮ ಸಂಗೀತವನ್ನು ಎಲ್ಲೆಡೆ ಪಸರಿಸುವಲ್ಲಿ ಸಮ್ಮೇಳನಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿವೆ. 18 ವರ್ಷಗಳಿಂದ ಮುದ್ದುಕೃಷ್ಣ ನೇತೃತ್ವದಲ್ಲಿ ಸಮ್ಮೇಳನ ನಡೆದಿರುವುದು ಇದಕ್ಕೆ ಸಾಕ್ಷಿ ಎಂದರು.

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ, ಪುರಸಭೆ ಉಪಾಧ್ಯಕ್ಷ ಮಾಲಾ ಭಾರ್ಗವ್‌ ವೇದಿಕೆಯಲ್ಲಿದ್ದರು.

ಪ್ರಶಸ್ತಿ ಪ್ರದಾನ: ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಮತ್ತು ಕಾ.ವೆಂ. ಶ್ರೀನಿವಾಸ್‌ ಮೂರ್ತಿ ಅವರಿಗೆ ‘ಕಾವ್ಯಶ್ರೀ ಪ್ರಶಸ್ತಿ’, ಪುತ್ತೂರು ನರಸಿಂಹ ನಾಯಕ್‌ ಹಾಗೂ ರೋಹಿಣಿ ಮೋಹನ್‌ ಅವರಿಗೆ ‘ಭಾವಶ್ರೀ’ ಪ್ರಶಸ್ತಿಗಳನ್ನು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್‌ ರಾಯಪುರ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT