ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲ್ಲೂರು ಹುಣಸೆ ತೋಪು: ಜೀವವೈವಿಧ್ಯ ತಾಣ

ಭಾರತದ ಮೊದಲನೇ ಪಾರಂಪರಿಕ ತಾಣ l ಶತಮಾನಗಳಷ್ಟು ಹಳೆಯ ನೂರಾರು ಹುಣಿಸೆ ಮರಗಳ ಬೀಡು
Last Updated 27 ಮಾರ್ಚ್ 2023, 5:14 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ (ದೇವನಹಳ್ಳಿ): ಚನ್ನರಾಯಪಟ್ಟಣ ಹೋಬಳಿಯ ನಲ್ಲೂರು ಗ್ರಾಮ ಬಳಿ ಇರುವ ನೂರಾರು ವರ್ಷಗಳಷ್ಟು ಹಳೆಯದಾದ ಹುಣಸೆ ಮರಗಳ ತೋಪು ದೇಶದ ಮೊದಲನೇ ಜೀವವೈವಿಧ್ಯ ಪಾರಂಪರಿಕ ತಾಣ ಎಂಬ ಹೆಗ್ಗಳಿಕೆ ಹೊಂದಿದೆ.

ಗ್ರಾಮದ ಬಳಿಯಿರುವ ಹುಣಸೆ ಮರಗಳ ತೋಪು ಶತಮಾನ ಕಂಡ ನೂರಾರು ಹುಣಸೆ ಮರಗಳ ನೆಲೆ. ಸುಮಾರು 410 ವರ್ಷಗಳಷ್ಟು ಹಳೆಯದಾದ ಭಾರಿ ಗಾತ್ರದ ಹುಣಸೆ ಮರಗಳೂ ಇಲ್ಲಿವೆ. ಇವುಗಳ ನಡುವೆ ಚೋಳರ ಕಾಲದ ದೇವಾಲಯಗಳು ಗಮನ ಸೆಳೆಯುತ್ತವೆ.

ದೇವನಹಳ್ಳಿಯಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ಈ ಹುಣಸೆ ತೋಪು ಐತಿಹಾಸಿಕ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಇಲ್ಲಿನ ಕೆಲವು ಹುಣಸೆ ಮರಗಳು ಬುಡದಲ್ಲೇ ಕವಲೊಡೆದು ವಿಶಿಷ್ಟ ಆಕಾರಗಳಲ್ಲಿ ಬೆಳೆದು ನಿಂತಿವೆ. ಗುಮ್ಮಟ, ಅಂಡಾಕಾರ, ಅರ್ಧ ವೃತ್ತಾಕಾರ, ಶಂಕಾಕಾರ, ಅಂಕುಡೊಕಾದ ಶಿರಭಾಗವನ್ನು ಹೊಂದಿರುವ ಹುಣಸೆ ಮರಗಳು ಜನರನ್ನು ಆಕರ್ಷಿಸುತ್ತವೆ. ಟನ್‌ಗಟ್ಟಲೆ ಹುಣಸೆ ಫಸಲನ್ನು ಪ್ರತಿ ವರ್ಷ ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ.

ಹುಣಸೆ ತೋಪು ಸದ್ಯ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಇಲ್ಲಿನ ಪ್ರತಿ ಮರಕ್ಕೂ ಗುರುತಿನ ಸಂಖ್ಯೆಯ ಫಲಕಗಳನ್ನು ಅಳವಡಿಸಿದೆ. ಭದ್ರತೆಗಾಗಿ ಸಿಬ್ಬಂದಿಯನ್ನೂ ಇಲಾಖೆ ನಿಯೋಜಿಸಿದೆ. 14 ವರ್ಷಗಳಿಂದ ತೋಪು ಕಾಯುತ್ತಿದ್ದಾರೆ. ಇಲ್ಲಿಗೆ ಭೇಟಿ ನೀಡುವವರಿಗೆ ಮಾಹಿತಿ ನೀಡುವ ಗೈಡ್ ಆಗಿ ಕೆಲಸ
ಮಾಡುತ್ತಿದ್ದಾರೆ.

ಕೆಲವು ಮರಗಳು ಎಷ್ಟು ಹಳೆಯವು ಎಂಬುದನ್ನು ತಿಳಿಯಲು ಅವುಗಳ ಭಾಗಗಳನ್ನು ‘ಕಾರ್ಬನ್ ಡೇಟಿಂಗ್’ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. 155ನೇ ಕ್ರಮಾಂಕದ ಹುಣಸೆ ಮರವು ಸುಮಾರು 410 ವರ್ಷಗಳಷ್ಟು ಹಳೆಯದು ಹಾಗೂ ಇತರ ಕೆಲವು ಮರಗಳು 200 ವರ್ಷಗಳಷ್ಟು ಹಳೆಯವು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ದೃಢಪಡಿಸಿದೆ.

‘ನೂರಾರು ವರ್ಷಗಳ ಹಿಂದೆ ನಲ್ಲೂರು ಕೋಟೆಯನ್ನು ರಾಜರು ಆಳುತ್ತಿದ್ದರಂತೆ. ಅವರೊಮ್ಮೆ ಆಹಾರಕ್ಕಾಗಿ ಗೊಜ್ಜು ಸಿದ್ಧಪಡಿಸಲು ಬಳಸಿದ್ದ ಹುಣಸೆ ಬೀಜಗಳನ್ನು ಇಲ್ಲಿ ಬಿಸಾಡಿದ್ದರಂತೆ. ಆ ಬೀಜಗಳಿಂದ ಈ ಹುಣಸೆ ತೋಪು ಹುಟ್ಟಿಕೊಂಡಿದೆಯಂತೆ. ನಲ್ಲೂರು ಕೋಟೆ ಎಂದರೆ ಪ್ರತ್ಯೇಕ ಕೋಟೆ ಇಲ್ಲಿಲ್ಲ. ಹುಣಸೆ ಮರಗಳೇ ನಲ್ಲೂರಿಗೆ ಕೋಟೆಯಂತಿದ್ದವು’ ಎಂದು ಸ್ಥಳೀಯರು ಹುಣಸೆ ತೋ‍ಪಿನ ಐತಿಹ್ಯ ಬಿಚ್ಚಿಟ್ಟರು.

ಇತಿಹಾಸ ಏನು ಹೇಳುತ್ತದೆ: ನಲ್ಲೂರು ಹುಣಸೆ ತೋಪಿನ ಇತಿಹಾಸ ಕೆದಕುತ್ತಾ ಹೋದಂತೆ ಭಿನ್ನವಾದ ಕಥೆಗಳು ತೆರೆದುಕೊಳ್ಳುತ್ತವೆ. ಈ ತೋಪು ಸಾವಿರ ವರ್ಷಗಳಷ್ಟು ಹಳೆಯದು ಎಂದೂ ಕೆಲವರು ಹೇಳುತ್ತಾರೆ. ಆದರೆ, ‘ಈ ಪ್ರಾಂತ್ಯ 13ನೇ ಶತಮಾನದಲ್ಲಿ ಚೋಳ ವಂಶದ ರಾಜರ ಅಧೀನದಲ್ಲಿತ್ತು’ ಎಂದು ಹೇಳುತ್ತಿದೆ.

ತೋಪಿನಲ್ಲಿ ಐತಿಹಾಸಿಕವಾದ ಚನ್ನಕೇಶವಸ್ವಾಮಿ ದೇವಾಲಯವಿದೆ. ಅದರ ಗೋಡೆಗಳ ಮೇಲೆ ಕೆತ್ತಲಾಗಿರುವ ವಾಸ್ತುಶಿಲ್ಪದ ಸೌಂದರ್ಯವನ್ನು ಇಲ್ಲಿಗೆ ಬರುವವರು ಸವಿಯುತ್ತಾರೆ. ಆದರೆ, ಇದು ಇತ್ತೀಚಿನ ವರ್ಷಗಳಲ್ಲಿ ಶಿಥಿಲಾವಸ್ಥೆ ತಲುಪಿದ್ದು, ದೇವಾಲಯದ ಕೆಲವು ಚಪ್ಪಡಿಗಳು ಧರೆಗುರುಳಿವೆ. ಹಾಗಾಗಿ, ದೇವಾಲಯದ ಒಳಭಾಗಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ
ಹೇಳುತ್ತಾರೆ.

ವಾರಾಂತ್ಯದಲ್ಲಿ ತೋಪು ವೀಕ್ಷಿಸಲು ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ, ಸಮರ್ಪಕ ನಿರ್ವಹಣೆ ಇಲ್ಲದ ತೋಪಿನ ದುಃಸ್ಥಿತಿ ಅವರಲ್ಲಿ ನಿರಾಶೆ ಮೂಡಿಸುತ್ತಿದೆ. ತೋಪಿನಲ್ಲಿ ಅನವಶ್ಯಕ ಗಿಡ–ಗಂಟಿಗಳು ಬೆಳೆದುಕೊಂಡಿವೆ. ಅವುಗಳನ್ನು ತೆರವುಗೊಳಿಸುವುದಕ್ಕೆ ಅರಣ್ಯ ಇಲಾಖೆಯೂ ಮುಂದಾಗಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಯಾವುದೇ ಮೂಲಸೌಕರ್ಯಗಳಿಲ್ಲ. ಪುರಾತನ ದೇವಾಲಯವೂ ನಶಿಸುತ್ತಿದೆ. ಹುಣಸೆ ತೋಪಿನ ಸುತ್ತ ಗುಣಮಟ್ಟದ ಬೇಲಿ ನಿರ್ಮಿಸಬೇಕು. ತಾಣವನ್ನು ಸಂರಕ್ಷಿಸಲು ಸರ್ಕಾರ ವಿಶೇಷ ಗಮನ ಹರಿಸಬೇಕು’ ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

ನಲ್ಲೂರು ಸುತ್ತಮುತ್ತಲಿನ ಗ್ರಾಮಸ್ಥರು ಇಂದಿನ ಜಿಲ್ಲಾಧಿಕಾರಿಗಳ್ಲಿಗೆ ಪುರಾತನ ಕಾಲದ ಹುಣಿಸೆ ತೋಪು ಉಳಿಸುವ ನಿಟ್ಟಿನಲ್ಲಿ ಮನವಿ ನೀಡಿ ಕೇಂದ್ರ ಜೀವವೈವಿಧ್ಯ ಸಂಸ್ಥೆಯ ವತಿಯಿಂದ ಪರಿಶೀಲಿಸಿ ಚೋಳರ ಕಾಲದ ಹುಣಿಸೆ ಮರಗಳು ಎಂದು ಪತ್ತೆ ಹಚ್ಚಿ ಈ ತಾಣಕ್ಕೆ ವಿಶ್ವ ಪಾರಂಪರಿಕ ತಾಣ ಎಂದು 2022–23ನೇ ಸಾಲಿನಲ್ಲಿ ಷೋಷಣೆ ಮಾಡಿದ್ದಾರೆ ಎಂದು ಮಾಹಿತಿ ಗಂಗಮ್ಮ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ಲಕ್ಷ್ಮೀನಾರಾಯಣ್ ಮಾಹಿತಿ ನೀಡಿದರು.

ವಿಶ್ವ ಪಾರಂಪರಿಕ ತಾಣ ಎಂದು ಘೋಷಣೆಯಾಗಿರುವ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಇರುವ ಐತಿಹಾಸಿಕ ಮಹತ್ವದ ನಲ್ಲೂರು ಹುಣಸೆ ತೋಪನ್ನು ಕಾಯಲು ಸಿಬ್ಬಂದಿ ನಿಯೋಜಿಸಿದರೆ ಸಾಲದು. ಕಾವಲು ಸಿಬ್ಬಂದಿ ಸಂಜೆವರೆಗೆ ಮಾತ್ರ ಇಲ್ಲಿರುತ್ತಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಈ ಪಾರಂಪರಿಕ ತಾಣ ನಶಿಸುತ್ತಿದೆ. ಹುಣಸೆ ತೋಪಿನ ಇತಿಹಾಸ, ವಿವರ ನೀಡಲು ವರ್ಷಗಳೇ ಕಳೆದಿವೆ ಇದನ್ನು ರಕ್ಷಿಸಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ನಲ್ಲೂರು ಗ್ರಾ.ಪಂ. ಅಧ್ಯಕ್ಷ ಗಂಗಧಾರ್ ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT