ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಕ್ಯಾಮೆರಾದಲ್ಲಿ ಗ್ರಾಮೀಣ ಚಿತ್ತಾರ

ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಭಾಜನರಾದ ಛಾಯಾಗ್ರಾಹಕ ಬಿ.ಸುಧೀರ್‌ ಕೈಚಳಕ
Last Updated 4 ಮೇ 2020, 0:55 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ನೊಂದವರ ನೋವು ನೋಯದವರೇನು ಬಲ್ಲರು’ ಎನ್ನುವ ವಚನಕಾರರ ಮಾತಿನಂತೆ ಇದೆ ಈ ಫೋಟೊಗ್ರಫಿ. ಮನಸ್ಸಿನಲ್ಲಿ ಇರುವ ಕಲ್ಪನೆಯಂತೆ ಚಿತ್ರ ಮೂಡಿರಬೇಕು ಅಂದರೆ ಅದರ ಹಿಂದೆ ಸಾಕಷ್ಟು ಸಿದ್ಧತೆ, ಶ್ರಮ ಅವಶ್ಯ. ಆಗ ಮಾತ್ರ ಗ್ರಾಮೀಣ ಬದುಕಿನ ಫೋಟೊಗಳು ನೈಜವಾಗಿ ಸೆರೆ ಹಿಡಿಯಲು ಸಾಧ್ಯ ಎನ್ನುತ್ತಾರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಯುವ ಛಾಯಾಗ್ರಾಹಕ ಬಿ.ಸುಧೀರ್‌.

ರಾಜ್ಯದ ಖ್ಯಾತ ಛಾಯಾಗ್ರಾಹಕರಾದ ಬಿ.ಶ್ರೀನಿವಾಸ್‌ ಅವರ ಫೋಟೊಗ್ರಫಿ ನೋಡುತ್ತಲೇ ಬೆಳೆದಿರುವ ಸುಧೀರ್‌, ಕಾಲೇಜು ದಿನಗಳಿಂದಲೇ ಫೋಟೊಗ್ರಫಿ ಹವ್ಯಾಸವಾಗಿ ರೂಢಿಸಿಕೊಂಡವರು. ನಗರದಲ್ಲೇ ಅತ್ಯಂತ ಹಳೆಯ ಸ್ಟುಡಿಯೊ ಎಂದು ಹೆಸರು ಮಾಡಿರುವ ಅಪೋಲೋ ಸ್ಟುಡಿಯೊ ನಡೆಸುತ್ತಿರುವ ಸುಧೀರ್, ಬಿಡುವಿನ ವೇಳೆಯಲ್ಲಿ ಸಮಯ ವ್ಯರ್ಥ ಮಾಡದೆ ಸೃಜನಶೀಲವಾಗಿ ಚಿಂತಿಸಿ ಫೋಟೊ ತೆಗೆಯುವುದರಲ್ಲಿ ಸಿದ್ಧಹಸ್ತರು.

’ಗ್ರಾಮೀಣ ಬದುಕಿನ ಚಿತ್ರಗಳನ್ನು ತೆಗೆಯಲು ಅತಿ ಮುಖ್ಯವಾಗಿ ಬೇಕಾಗಿರುವುದು ಸೂರ್ಯನ ಬೆಳಕಿನ ಹೊಂದಾಣಿಕೆ. ಹಾಗೆಯೇ ನಾವು ಯಾವ ಸಂದರ್ಭದಲ್ಲಿ ಫೋಟೊ ತೆಗೆಯಬೇಕು ಎನ್ನುವ ಸ್ಪಷ್ಟ ಕಲ್ಪನೆ ಮನಸ್ಸಿನಲ್ಲಿ ಇರಬೇಕು. ಗ್ರಾಮೀಣ ಬದುಕಿನ ಸಹಜತೆ ಫೋಟೊದಲ್ಲಿ ತರಲು ಸಾಕಷ್ಟು ಪೂರ್ವತಯಾರಿ ಅಗತ್ಯ ಇದೆ ಎನ್ನುತ್ತಾರೆ’ ಅವರು.

’ನಮ್ಮ ತಾಯಿ ಮಂಡ್ಯ ಜಿಲ್ಲೆಯವರು. ಅಜ್ಜಿ ಮನೆಗೆ ಹೋದಾಗಲೆಲ್ಲ ಈ ಭಾಗದಲ್ಲಿನ ಭತ್ತದ ಒಕ್ಕಣೆ, ಉಳುಮೆ ಸೇರಿದಂತೆ ಗ್ರಾಮೀಣ ಬದುಕನ್ನು ಹತ್ತಿರದಿಂದ ನೋಡುತ್ತಿದ್ದೆ. ಹೀಗಾಗಿ ಗ್ರಾಮೀಣ ಬದುಕಿನ ಚಿತ್ರಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲು ಕಾರಣವಾಯಿತು. ಗ್ರಾಮೀಣ ಬದುಕಿನ ಚಿತ್ರಗಳನ್ನು ತೆಗೆಯಲು ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಹತ್ತಾರು ಬಾರಿ ಸುತ್ತಾಡಿ, ಯಾವ ಸಮಯದಲ್ಲಿ ಫೋಟೊ ತೆಗೆದರೆ ಬೆಳಕಿನ ಹೊಂದಾಣಿಕೆಯಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಂಡು ಹಲವು ಬಾರಿ ಫೋಟೊ ತೆಗೆದರೂ ಸಮಾಧಾನವಾಗದೆ ಡಿಲಿಟ್‌ ಮಾಡಿರುವ ಸಂದರ್ಭವೂ ಇದೆ‘ ಎಂದು ವೃತ್ತಿ ಬದುಕಿನ ಶ್ರದ್ಧೆ ಬಗ್ಗೆ ಅಭಿಮಾನದಿಂದ ಹೇಳಿಕೊಂಡರು.

ವರ್ಷಗಟ್ಟಲೆ ಕಾದಿರುವೆ

ರಾಗಿ ಕಣದಲ್ಲಿ ಕೆಲಸ ಮಾಡುವ ಚಿತ್ರಗಳಿಗಾಗಿ ವರ್ಷಗಟ್ಟಲೆ ಕಾದು ತೆಗೆಯಲಾಗಿದೆ. ಹಲವು ಬಾರಿ ತೆಗೆದ ಚಿತ್ರಗಳಲ್ಲಿ ಬೆಳಕಿನ ಹೊಂದಾಣಿಕೆ ಸರಿಹೋಗದ ಕಾರಣದಿಂದಾಗಿ ಮತ್ತೆ ಮುಂದಿನ ವರ್ಷ ರಾಗಿ ಕಣದ ಸುಗ್ಗಿ ಬರುವವರೆಗೂ ಕಾದಿರುವ ಉದಾಹರಣೆಗಳು ಇವೆ. ಸಾಕಷ್ಟು ಜನ ಫೋಟೊ ತೆಗೆಯುವ ಹವ್ಯಾಸ ಇರುವವರು ಪ್ರಾಣಿ, ಪಕ್ಷಿಗಳ ಕಡೆಗೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ಗ್ರಾಮೀಣ ಬದುಕಿನ ಚಿತ್ರಗಳನ್ನು ತೆಗೆಯುವುದು ಸುಲಭ ಎನ್ನುವ ಭಾವನೆ ಇರಬಹುದು ಅಥವಾ ಗ್ರಾಮೀಣ ಜೀವನದ ಚಿತ್ರಗಳು ಜನರನ್ನು ಆಕರ್ಷಿಸುತ್ತವೊ, ಇಲ್ಲವೊ ಎನ್ನುವ ಅನುಮಾನ ಇರಬಹುದು. ಆದರೆ, ಈಗಿನ ನಗರೀಕರಣದ ಬೆಳವಣಿಗೆ ಗಮನಿಸಿದರೆ ಗ್ರಾಮೀಣ ಬದುಕೇ ನಶಿಸಿ ಹೋಗುವ ಕಾಲ ದೂರವಿಲ್ಲ ಎನ್ನುವ ಆತಂಕವೂ ಇದೆ. ಈ ನಿಟ್ಟಿನಲ್ಲಿ ಈ ಚಿತ್ರಗಳು ಸಂಗ್ರಹ ಯೋಗ್ಯ ಎನ್ನುತ್ತಾರೆ ಸುಧೀರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT