ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಓಂಕಾರೇಶ್ವರ ದೇಗುದಲ್ಲಿ 4 ಹುಂಡಿ ಹಣ ಕಳವು

Published 15 ಜನವರಿ 2024, 15:45 IST
Last Updated 15 ಜನವರಿ 2024, 15:45 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪಟ್ಟಣದ ಗುರಪ್ಪನಮಠದ ಓಂಕಾರೇಶ್ವರ ದೇವಾಲಯದಲ್ಲಿ ಸೋಮವಾರ ಮುಂಜಾನೆ ಹುಂಡಿಗಳಲ್ಲಿನ ಹಣ ಕಳವು ನಡೆದಿದೆ.

ದೇವಾಲಯದ ಮೇಲೆ ಅಳವಡಿಸಿದ್ದ ತಗಡಿನ ಶೀಟ್ ನ ಬೋಲ್ಟ್ ಗಳನ್ನು ಬಿಚ್ಚಿರುವ ಕಳ್ಳರು, ದೇವಾಲಯದೊಳಗೆ ಇಳಿದಿದ್ದಾರೆ. ದೇವಾಲಯದ ಮುಖ್ಯದ್ವಾರದ ಬಾಗಿಲಿಗೆ ಚಿಲಕ ಹಾಕಿದ್ದಾರೆ. ನಂತರ ದೇವಾಲಯದಲ್ಲಿದ್ದ ನಾಲ್ಕು ಹುಂಡಿಗಳ ಬೀಗಗಳು ಮುರಿದು ಹಣ ಕದ್ದು ಪುನಃ ಮೇಲ್ಛಾವಣಿಯ ಮೂಲಕ ವಾ‍‍ಪಸ್‌ ಹೋಗಿದ್ದಾರೆ. ಕಳೆದ 4 ತಿಂಗಳಿನಿಂದ ಹುಂಡಿಯನ್ನು ಎಣಿಕೆ ಮಾಡಿರಲಿಲ್ಲ. ಕಾರ್ತಿಕ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಹೋಗಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾಗಿರಬಹುದೆಂದು ಆಡಳಿತ ಮಂಡಳಿಯವರು ಅಂದಾಜಿಸಿದ್ದಾರೆ.

ಸಂಕ್ರಾಂತಿ ಹಬ್ಬದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುವುದು. ಭಾನುವಾರ ತಂದು ಇಟ್ಟಿದ್ದ ₹15 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಚಿನ್ನದ ಒಡವೆ ಮುಟ್ಟಿಲ್ಲ. ದೇವಾಲಯದಲ್ಲಿನ ಪಾರ್ವತಿ ದೇವಿ ಮೂರ್ತಿ ಬಳಿಗೆ ಹೋಗಿ ಆಭರಣ ತೆಗೆಯುವ ಪ್ರಯತ್ನ ಮಾಡಿ, ವಿಫಲರಾಗಿದ್ದಾರೆ. ದೇವಿಗೆ ಹಾಕಿದ್ದ ಬಳೆಗಳು ಒಡೆದುಹೋಗಿವೆ.

ಹಬ್ಬದ ದಿನದಂದು ಬೆಳಿಗ್ಗೆ 4 ಗಂಟೆ‌ ಸಮಯದಲ್ಲಿ ಅರ್ಚಕರ ಕುಟುಂಬದವರು ದೇವಾಲಯ ಶುಚಿಗೊಳಿಸಲೆಂದು ಬಂದಾಗ ದೇವಾಲಯದ ಬೀಗ ತೆಗೆದು, ಬಾಗಿಲು ತಳ್ಳುವ ಪ್ರಯತ್ನ ಮಾಡಿದ್ದಾರೆ. ಬಾಗಿಲು ತೆರೆಯಲು ಸಾಧ್ಯವಾಗದಿದ್ದಾಗ ಗಾಬರಿಗೊಂಡ ಕುಟುಂಬದವರು ಅರ್ಚಕರಿಗೆ ವಿಚಾರ ತಿಳಿಸಿದ್ದಾರೆ.

ತಕ್ಷಣ ಬಂದು ನೋಡಿದಾಗ ಒಳಗಿನಿಂದ ಬಾಗಿಲು ಹಾಕಿರುವುದು ಗೊತ್ತಾಗಿದೆ. ಕೂಡಲೇ ದೇವಾಲಯದ ಆಡಳಿತ ಮಂಡಳಿಯವರಿಗೆ ವಿಷಯ ಮುಟ್ಟಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದಿದ್ದ ಪೊಲೀಸರು, ಮೇಲ್ಛಾವಣಿ ಮೂಲಕ ಸ್ಥಳೀಯರೊಬ್ಬರನ್ನು ಇಳಿಸಿ, ಒಳಗೆ ಹಾಕಿದ್ದ ಚಿಲಕ ತೆಗೆಸಿದ್ದಾರೆ. ದೇವಾಲಯದ ಆಡಳಿತ ಮಂಡಳಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಬೆರಳಚ್ಚು ತಜ್ಞರನ್ನು ಕರೆಯಿಸಿ ಬೆರಳಚ್ಚು ಪಡೆದುಕೊಂಡಿದ್ದಾರೆ. ಕಳ್ಳರ ಪತ್ತೆಗಾಗಿ ಸಮೀಪದ ಕಟ್ಟಡಗಳಲ್ಲಿನ ಸಿ.ಸಿ.ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT