ದೊಡ್ಡಬಳ್ಳಾಪುರ: ಕೆಲಸದ ಒತ್ತಡಕ್ಕೆ ಒಳಗಾಗಿ ಪೋಷಕರು ಮಕ್ಕಳತ್ತ ಗಮನಹರಿಸುತ್ತಿಲ್ಲ. ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವಲ್ಲಿ ಪೋಷಕರ ಹೊಣೆಗಾರಿಕೆ ಮುಖ್ಯವಾಗಿದೆ ಎಂದು ಡಿವೈಎಸ್ಪಿ ಟಿ.ರಂಗಪ್ಪ ಹೇಳಿದರು.
ನಗರದಲ್ಲಿನ ಲಾವಣ್ಯ ವಿದ್ಯಾ ಸಂಸ್ಥೆ ವತಿಯಿಂದ ನಡೆದ ಹರ್ಷೋತ್ಸವ-2019 ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಜವಾಬ್ದಾರಿ ಶಿಕ್ಷಕರದ್ದು ಎನ್ನುವ ಮನೋಭಾವ ಆತಂಕಕಾರಿ ಬೆಳವಣಿಗೆ. ಮುದ್ದಿನಿಂದ ಮಕ್ಕಳನ್ನು ಬೆಳೆಸುತ್ತಿರುವುದು, ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಮಕ್ಕಳು ಹಾದಿತಪ್ಪಲು ಕಾರಣವಾಗುತ್ತಿದೆ. ಇದರಲ್ಲಿ ಮೊಬೈಲ್ ಮೊದಲ ಸ್ಥಾನದಲ್ಲಿದೆ. ಆನ್ಲೈನ್ ಗೇಮ್, ಸಾಮಾಜಿಕ ಜಾಲತಾಣಗಳು ಮಕ್ಕಳ ಶೈಕ್ಷಣಿಕ ಹಿನ್ನಡೆ ಕಾರಣವಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಮಾತನಾಡಿ, ಮಕ್ಕಳಿಗೆ ಆಸ್ತಿ ಮಾಡಲು ಶ್ರಮಿಸುತ್ತಿರುವ ಪೋಷಕರು ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸುವತ್ತ ಚಿಂತಿಸಬೇಕು. ಉತ್ತಮ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ ಎಂದರು.
ಕಾರ್ಯಕ್ರಮಉದ್ಘಾಟಿಸಿದ ಬಿಜೆಪಿ ಹಿರಿಯ ಮುಖಂಡ ಜೆ.ನರಸಿಂಹಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹ ಪೋಷಕರಲ್ಲಿ ಮಿತಿ ಮೀರಿದ್ದು ಕನ್ನಡ ಭಾಷೆಗೆ ಕಂಠಕವಾಗುತ್ತಿದೆ ಎಂದರು.
ಆಡಳಿತಾಧಿಕಾರಿ ಯಶೋಧಮ್ಮ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎನ್.ಹನುಮಂತೇಗೌಡ, ಲಾವಣ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಗೋಪಾಲ, ಲಾವಣ್ಯ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಜೆ.ವಿ.ಚಂದ್ರಶೇಖರ್, ಲಾವಣ್ಯ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ.ಎಚ್.ವೆಂಕಟೇಶ್ ಇದ್ದರು.