ಗೋಕಾಕ: ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು ಅರಭಾವಿ ಮತಕ್ಷೇತ್ರದ 33 ಗ್ರಾಮ ಪಂಚಾಯಿತಿಗಳಲ್ಲಿ ಮೇಲುಗೈ ಸಾಧಿಸಿದ್ದಾರೆ.
ಮೊದಲ ಸುತ್ತಿನ ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ ಮೆಳವಂಕಿ, ಕೌಜಲಗಿ, ಗೋಸಬಾಳ, ಬೆಟಗೇರಿ, ಉದಗಟ್ಟಿ, ಧರ್ಮಟ್ಟಿ, ಗುಜನಟ್ಟಿ, ಪಟಗುಂದಿ, ಶಿವಾಪೂರ (ಹ), ಖಾನಟ್ಟಿ, ಹುಣಶ್ಯಾಳ ಪಿ.ವೈ. ತಿಗಡಿ, ಮಸಗುಪ್ಪಿ, ಕಾಮನಕಟ್ಟಿ ಗ್ರಾ.ಪಂ.ಗಳಲ್ಲಿ ಅವರ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಎರಡನೇ ಸುತ್ತಿನ ಪಂಚಾಯಿತಿಗಳ ಮತಗಳ ಎಣಿಕೆ ರಾತ್ರಿವರೆಗೂ ಪ್ರಗತಿಯಲ್ಲಿದ್ದು ಅದರಲ್ಲಿ ಬಡಿಗವಾಡ, ಕಳ್ಳಿಗುದ್ದಿ, ದುರದುಂಡಿ, ವಡೇರಹಟ್ಟಿ, ತುಕ್ಕಾನಟ್ಟಿ, ಕುಲಗೋಡ, ಹುಣಶ್ಯಾಳ ಪಿ.ಜಿ., ಢವಳೇಶ್ವರ, ಯಾದವಾಡ ಮತ್ತು ಹಳ್ಳೂರ ಗ್ರಾಮ ಪಂಚಾಯಿತಿಗಳಲ್ಲೂ ಮುನ್ನಡೆಯಲ್ಲಿದ್ದಾರೆ.
ಅರಭಾವಿ ಮತಕ್ಷೇತ್ರದಲ್ಲಿ 584 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಅಲ್ಲಿ ಶಾಸಕ ಸಂಪೂರ್ಣ ಹಿಡಿತ ಸಾಧಿಸಿದ್ದು, ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಸಂಪೂರ್ಣ ನೆಲಕಚ್ಚಿರುವುದು ಕಂಡುಬಂದಿದೆ. ಗೆಲುವು ಸಾಧಿಸಿದದವರು ಇಲ್ಲಿನ ಎನ್ಎಸ್ಎಫ್ ಅತಿಥಿ ಗೃಹಕ್ಕೆ ಬಂದು ವಿಜಯೋತ್ಸವ ಆಚರಿಸಿದರು.
ಶಾಸಕರ ಪರವಾಗಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಲಕ್ಕಪ್ಪ ಲೋಕುರಿ, ದಾಸಪ್ಪ ನಾಯಿಕ, ನಿಂಗಪ್ಪ ಕುರಬೇಟ ಅವರನ್ನು ನೂತನ ಸದಸ್ಯರು ಹಾಗೂ ಮುಖಂಡರು ಹೂಮಾಲೆ ಹಾಕಿ ಅಭಿನಂದಿಸಿದರು.
ನಲ್ಲಾನಟ್ಟಿ, ಬಳೋಬಾಳ, ಲೋಳಸೂರ, ತಪಸಿ, ದಂಡಾಪೂರ, ಸುಣಧೋಳಿ, ಅವರಾದಿ, ಮುನ್ಯಾಳ ಮತ್ತು ರಾಜಾಪೂರ ಗ್ರಾಮ ಪಂಚಾಯಿತಿಗಳ ಮತ ಎಣಿಕೆ ತಡರಾತ್ರಿವರೆಗೂ ನಡೆಯಿತು.
ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಮತದಾರರಿಗೆ ಬಾಲಚಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
‘ಎಲ್ಲ ಪಂಚಾಯಿತಿಗಳಲ್ಲೂ ಬಿಜೆಪಿ ಬೆಂಬಲಿತರೇ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ನಮ್ಮ ಬೆಂಬಲಿಗರೇ ಜಯ ಗಳಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು. ಪ್ರತಿ ಪಂಚಾಯಿತಿಗಳಲ್ಲಿ ನಮ್ಮ ಬೆಂಬಲಿಗರಲ್ಲೇ ಎರಡೆರಡು ಬಣಗಳು ಸೃಷ್ಟಿ ಆಗಿದ್ದರಿಂದ ಗೆದ್ದವರಿಗೆ ಖುಷಿ ಹಾಗೂ ಸೋತವರಿಗೆ ನಿರಾಸೆಯಾಗಿದೆ. ಸೋಲು– ಗೆಲುವನ್ನು ಸಮನಾಗಿ ಸ್ವೀಕರಿಸಿ. ಅಭಿವೃದ್ಧಿ ಕಾರ್ಯಗಳತ್ತ ಮುನ್ನಡೆಯಿರಿ. ಗ್ರಾಮ ವಿಕಾಸಕ್ಕಾಗಿ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಶ್ರಮಿಸಿ ಮತದಾರರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.