ಗೋಕಾಕ: ‘ವಿಚಾರವಂತರನ್ನು ಆಯ್ಕೆ ಮಾಡಿ ರಾಜ್ಯಸಭೆಗೆ ಕಳುಹಿಸುವುದು ವಾಡಿಕೆ. ಹೀಗಿರುವಾಗ, ಪಕ್ಷವು ನನ್ನನ್ನು ಗ್ರಾಮೀಣ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಸತ್ತಿನ ಗಮನಕ್ಕೆ ತರಲೆಂದು ಆಯ್ಕೆ ಮಾಡಿದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಭಾನುವಾರ ಇಲ್ಲಿನ ಶೂನ್ಯ ಸಂಪಾದನಮಠಕ್ಕೆ ಭೇಟಿ ನೀಡಿ ಮುರುಘರಾಜೇಂದ್ರ ಸ್ವಾಮೀಜಿ ಅವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಪಕ್ಷ ನನಗೆ ಕೊಡುಗೆ ನೀಡಿದೆ. ಇದನ್ನು ಬಳಸಿಕೊಂಡು, ಅವಕಾಶ ದೊರೆತಾಗಲೆಲ್ಲ ಹಳ್ಳಿ ಜನರು ಬದುಕು–ಬವಣೆಯನ್ನು ಸರ್ಕಾರದ ಗಮನಕ್ಕೆ ತರುವ ಧ್ಯೇಯ ಹೊಂದಿದ್ದೇನೆ’ ಎಂದರು.
‘ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದೇನೆ. ವಿಧಾನಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆಗ ರಮೇಶ ಜಾರಕಿಹೊಳಿ ಅವರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದೆ. ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ತಿಳಿಸಿದ್ದರು’ ಎಂದು ನೆನೆದರು.
ಹೂಲಿಕಟ್ಟಿ ಶ್ರೀಮಠದ ಬಸವದೇವರು, ಮಲ್ಲಿಕಾರ್ಜುನ ಈಟಿ, ನಗರಸಭೆ ಸದಸ್ಯ ಎಸ್.ಎ. ಕೋತ್ವಾಲ್, ಚಂದ್ರಶೇಖ ಕೊಣ್ಣೂರ, ಶಾಮಾನಂದ ಪೂಜೇರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ, ನೋಟರಿ ಶಂಕರ ಗೋರೋಶಿ, ಶ್ರೀಶೈಲ ತುಪ್ಪದ ಇದ್ದರು.