ಬೆಳಗಾವಿ: ‘ಕೊಳೆ ಈಗ ನಮ್ಮೊಂದಿಗಿಲ್ಲ. ದೂರ ಹೋಗಿದೆ. ಅಂಥವರನ್ನು ಇಟ್ಟುಕೊಂಡಿದ್ದರೆ ಕಷ್ಟ ಆಗುತ್ತಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.
ಸೋಮವಾರ ನಡೆದ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕಾಂಗ್ರೆಸ್ ನಾಯಕ ಭರಮಗೌಡ (ರಾಜು) ಕಾಗೆ ಮನೆಗೆ ರಮೇಶ ಜಾರಕಿಹೋಳಿ ಭೇಟಿ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ‘ಬೇರೆ ಪಕ್ಷದವರನ್ನು ಪಕ್ಷದ ನಾಯಕರು ಮನೆಗೆ ಸೇರಿಸಬಾರದು’ ಎಂದೂ ಹೇಳಿದರು.
‘ಬೆಳಗಾವಿ ಚುನಾವಣೆಯನ್ನು ಇಡೀ ರಾಜ್ಯ ನೋಡುತ್ತಿದೆ. ಕಳೆದ ಚುನಾವಣೆಯಲ್ಲಿ ನಾವು ಶಿಸ್ತುಕ್ರಮ ವಹಿಸಲಿಲ್ಲ. ಹೀಗಾಗಿ ಈಗ ತೊಂದರೆ ಅನುಭವಿಸುತ್ತಿದ್ದೇವೆ’ ಎಂದರು.
ಅವರ್ಯಾವ ದೊಡ್ಡ ಸಾಹುಕಾರ?:‘ನಮ್ಮ ನಾಯಕರು ಬಿಜೆಪಿಯವರ ಜೊತೆ ಏಕೆ ನೆಂಟಸ್ತಿಕೆ ಇಟ್ಟುಕೊಂಡಿದ್ದೀರಿ? ಮನೆಗೆ ಸೇರಿಸುತ್ತಿದ್ದೀರೇಕೆ, ವಾಹನ ಕಳುಹಿಸಿದರೆಂದು ಹೋಗುತ್ತೀರೇಕೆ? ಅವರ್ಯಾವ ಡೊಡ್ಡ ಸಾಹುಕಾರ? ನೆಂಟಸ್ತನ ಅಥವಾ ವಿಶ್ವಾಸವನ್ನು ಚುನಾವಣೆ ವೇಳೆ ಇಟ್ಟುಕೊಳ್ಳಬೇಡಿ’ ಎಂದು ತಿಳಿಸಿದರು.