ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಹಾನಿ ಅಪಾರ; ಕವಡೆ ಕಾಸಿನ ಪರಿಹಾರ!

ಸರ್ಕಾರದ ನಡೆಗೆ ತೋಟಗಾರಿಕಾ ಬೆಳೆಗಾರರ ಅಸಮಾಧಾನ
Last Updated 19 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ನವೆಂಬರ್‌ನಲ್ಲಿ ಬಿದ್ದ ಅಕಾಲಿಕ ಮಳೆಯಂದ ಹಾನಿಗೊಳಗಾದ ತೋಟಗಾರಿಕೆ ಬೆಳೆಗಳಿಗೆ ಸರ್ಕಾರದಿಂದ ಪರಿಹಾರ ವಿತರಣೆ ಆರಂಭಿಸಲಾಗಿದೆ. ಆದರೆ, ಬೆಳೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕಟ್ಟಿರುವುದು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

‘ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ದಿನಕ್ಕೆ 3 ಬಾರಿ ಔಷಧಿ ಸಿಂಪಡಿಸಿ ದ್ರಾಕ್ಷಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಯಿತು. ಸರ್ಕಾರ ಕೊಟ್ಟ ಪರಿಹಾರ ಕೇವಲ ಒಂದು ಹೊತ್ತಿನ ಔಷಧಿ ಸಿಂಪಡಿಸುವ ಖರ್ಚಿಗೂ ಸಾಕಾಗಲಿಲ್ಲ. 3 ಎಕರೆ ದ್ರಾಕ್ಷಿ ಇದ್ದರೂ 2 ಎಕರೆಗೆ, 2 ಎಕರೆ ಇದ್ದಲ್ಲಿ 1 ಎಕರೆಗಷ್ಟೆ ಪರಿಹಾರ ಕೊಡಲಾಗುತ್ತಿದೆ. ಇದು ಮೂಗಿಗೆ ತುಪ್ಪ ಸವರುವ ಕೆಲಸವಷ್ಟೆ ಆಗಿದೆ’ ಎಂದು ಅಥಣಿ ತಾಲ್ಲೂಕಿನ ಕಕಮರಿಯ ರೈತ ಮುಖಂಡ ಈರಪ್ಪ ತಂಗಡಿ ಪ್ರತಿಕ್ರಿಯಿಸಿದರು.

‘ಅತಿ ಹೆಚ್ಚು ಖರ್ಚು ಮಾಡಿದರೆ ಮಾತ್ರ ದ್ರಾಕ್ಷಿ ಬೆಳೆ ಉಳಿಸಿಕೊಳ್ಳಲು ಸಾಧ್ಯವಿದೆ. ಇದು ಗೊತ್ತಿದ್ದರೂ ಸರ್ಕಾರದವರು ಅಲ್ಪಸ್ವಲ್ಪ ಹಣ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಈ ಭಾಗದಲ್ಲಿ ಬೆಂಬಿಡದೆ ಕಾಡುತ್ತಿರುವ ರೋಗ ಭಾದೆ, ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟವಾಗಿದೆ. ಎಲ್ಲವನ್ನೂ ಅಳೆದು ತೂಗಿ ಪರಿಹಾರ ಕೊಟ್ಟಿದ್ದರೆ ಅನುಕೂಲ ಆಗುತ್ತಿತ್ತು’ ಎಂದು ತೆಲಸಂಗದ ರೈತ ರಾಮು ಬಳ್ಳೊಳ್ಳಿ ಹೇಳಿದರು.

ಎಲ್ಲರಿಗೂ ಪರಿಹಾರ ಸಿಕ್ಕಿಲ್ಲ:

‘ದ್ರಾಕ್ಷಿ ಬೆಳೆ ಜೊತೆಗೆ ಉಳಿದ ಬೆಳೆಗಳನ್ನು ಹಾಕಿದ್ದ ರೈತರೂ ಬೆಳೆ ನಷ್ಟ ಆಗಿದ್ದರಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ದ್ರಾಕ್ಷಿ ಹೊರತುಪಡಿಸಿ ಉಳಿದ ಬೆಳೆಗಳಿಗ ಈವರೆಗೆ ಪರಿಹಾರ ಇನ್ನೂ ಸಿಕ್ಕಿಲ್ಲ’ ಎಂದು ಅವರು ತಿಳಿಸಿದರು.

ನವೆಂಬರ್‌ನಲ್ಲಿ ಅಕಾಲಿಕ ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದಾಗಿ ದ್ರಾಕ್ಷಿ ಮೊದಲಾದ ತೋಟಗಾರಿಕಾ ಬೆಳೆಗಳು ಹಾಳಾಗಿತ್ತು. ಅಥಣಿ ಹಾಗೂ ಕಾಗವಾಡ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರಿ 5,200 ಹೆಕ್ಟೇರ್‌ ಪ್ರದೇಶದ ದ್ರಾಕ್ಷಿ ಬೆಳೆಯಲ್ಲಿ ಬರೋಬ್ಬರಿ 3,200 ಹೆಕ್ಟೇರ್‌ ಹಾಳಾಗಿತ್ತು. ಒಟ್ಟು 4,688 ಮಂದಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಇತರ ಬೆಳೆಗಳೂ ಹಾನಿಗೆ ಒಳಗಾಗಿದ್ದವು.

ರೋಗ ಬಾಧೆ ಇತ್ತು:

‘ಮಳೆ ಹನಿ ಸಂಗ್ರಹ ಆಗುತ್ತಿದ್ದರಿಂದ ಗೊಂಚಲಿನಿಂದ ದ್ರಾಕ್ಷಿ ಕಾಯಿಗಳು ಉದುರಿದ್ದವು. ತಂಪು ವಾತಾವರಣದಿಂದಾಗಿ ಕೊಳೆ ರೋಗ ಬಾಧೆಯೂ ಬಂದಿತ್ತು. ನಿತ್ಯ ಮೂರ‍್ನಾಲ್ಕೂ ಬಾರಿಯಾದರೂ ಔಷಧ ಸಿಂಪಡಿಸಬೇಕಾದ ಸ್ಥಿತಿ ಇತ್ತು. ಚಾಟ್ನಿ, ಕಡ್ಡಿ ತಯಾರಿಕೆ, ಗೊಬ್ಬರ, ಔಷಧಿ ಸೇರಿ ಎಕರೆಗೆ ₹ 1.50 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ಅದರಲ್ಲಿ ಅರ್ಧ ಪರಿಹಾರವೂ ಸಿಕ್ಕಿಲ್ಲ’ ಎಂದು ಬೆಳೆಗಾರರು ತಿಳಿಸಿದರು.

‘ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಹೆಕ್ಟೇರ್‌ಗೆ ₹ 18ಸಾವಿರದಂತೆ ಗರಿಷ್ಠ 2 ಹೆಕ್ಟೇರ್‌ಗೆ ₹ 36ಸಾವಿರ ಪರಿಹಾರ ಒದಗಿಸಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಒಟ್ಟು 4,966 ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶವಾಗಿತ್ತು. 7,760 ರೈತರು ನಷ್ಟ ಅನುಭವಿಸಿದ್ದರು. ಮಾರ್ಗಸೂಚಿ ಪ್ರಕಾರ ₹ 8.50 ಕೋಟಿ ಪರಿಹಾರ ಕೋರಲಾಗಿದೆ. ಈವರೆಗೆ 4,765 ಮಂದಿಗೆ ಒಟ್ಟು ₹ 5.52 ಕೋಟಿ ಪರಿಹಾರವನ್ನು ಖಾತೆಗೆ ಜಮಾ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಇಲಾಖೆಯ ಅಂಕಿ–ಅಂಶ ಪ್ರಕಾರವೇ, ಇನ್ನೂ 2,995 ಮಂದಿಗೆ ಪರಿಹಾರ ಕೊಡುವುದು ಬಾಕಿ ಇದೆ.

ಹಾನಿ–‍ಪರಿಹಾರದ ವಿವರ

ತಾಲ್ಲೂಕು;ಹೆಕ್ಟೇರ್‌;ರೈತರ ಸಂಖ್ಯೆ;ಪಾವತಿಯಾದ ಮೊತ್ತ;ರೈತರ ಸಂಖ್ಯೆ

ಅಥಣಿ;3,912;6,157;₹ 5.02 ಕೋಟಿ;4,395

ಕಾಗವಾಡ;457;524;₹36 ಲಕ್ಷ;251

ಬೈಲಹೊಂಗಲ;32.43;61;₹72ಸಾವಿರ;03

ಕಿತ್ತೂರು;20.19;32;₹81ಸಾವಿರ;06

ಬೆಳಗಾವಿ;171.24;316;₹ 6.75 ಲಕ್ಷ;80

ಚಿಕ್ಕೋಡಿ;4.8;05;00;00

ನಿಪ್ಪಾಣಿ;05.;01;00;00

ಗೋಕಾಕ;23;26;₹ 4 ಲಕ್ಷ;26

ಮೂಡಲಗಿ;03;03;₹ 54ಸಾವಿರ;03

ಹುಕ್ಕೇರಿ;80.06;216;00;00

ರಾಯಬಾಗ;17.07;29;00;00

ರಾಮದುರ್ಗ;34.05;20;₹ 36ಸಾವಿರ;01

ಸವದತ್ತಿ;209;320;00;00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT