ಬೆಳಗಾವಿ: ಕಣಬರ್ಗಿ ಬಡಾವಣೆಯ ವ್ಯಾಪ್ತಿಯಲ್ಲಿನ ರೈತರ ಫಲವತ್ತಾದ ಭೂಮಿಯನ್ನು ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ವಶಕ್ಕೆ ಪಡೆದಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ಇಲ್ಲಿನ ಕಚೇರಿ ಎದುರು ಬುಧವಾರ ಅಹೋರಾತ್ರಿಪ್ರತಿಭಟನೆ ನಡೆಸಿದರು.
‘ಫಲವತ್ತಾದ ಕೃಷಿ ಭೂಮಿ ರೈತರ ಬದುಕಿಗೆ ಆಧಾರವಾಗಿವೆ. ಈ ಭೂಮಿ ವಶಪಡಿಸಿಕೊಳ್ಳದೇ ನಮ್ಮ ಭೂಮಿಯನ್ನು ನಮಗೆ ಕೊಡಿ ಎಂದು ಕನಕ ವೃತ್ತದಿಂದ ಬುಡಾ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ, ಆಗ್ರಹಿಸಿದರು. ಆದರೆ ಅಧಿಕಾರಿಗಳು ಸ್ಪಂದಿಸದೇ ಇರುವುದರಿಂದ ಅಹೋರಾತ್ರಿ ಧರಣಿ ನಡೆಸಿದ್ದಾರೆ. ರಾತ್ರಿ ಬುಡಾ ಕಚೇರಿ ಎದುರಿಗೆ ಅಡುಗೆ ಮಾಡುವ ಮೂಲಕ ಊಟ ಮಾಡಿ, ಅಲ್ಲೇ ತಂಗಿದ್ದರು. ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇರುವುದರಿಂದಾಗಿ ನಿಷೇಧಾಜ್ಞೆ ಜಾರಿಯಾಗಿದ್ದರಿಂದ ಪ್ರತಿಭಟನೆಯನ್ನು ಗುರುವಾರ ಹಿಂಪಡೆದರು.
‘ಕಣಬರ್ಗಿಯ ಬುಡಾ ವಸತಿ ಯೋಜನೆಗೆ 160 ಎಕರೆ ಪಡೆದುಕೊಳ್ಳಲಾಗುತ್ತಿದೆ. ಅದರಲ್ಲಿ ಈಗಾಗಲೇ ನ್ಯಾಯಾಲಯದ ಆದೇಶದ ಮೇರೆಗೆ 131 ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ. ಜತೆಗೆ ಬುಡಾ ವಶಪಡಿಸಿಕೊಂಡಿರುವ ಭೂಮಿಯನ್ನು ಆಧರಿಸಿ 200ಕ್ಕೂ ಹೆಚ್ಚು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ಬುಡಾ ಇಲಾಖೆ ಮನೆ ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದ್ದರಿಂದ ರೈತರ ಭೂಮಿಯನ್ನು ರೈತರಿಗೆ ಬಿಡಬೇಕು’ ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ, ರೈತ ಮುಖಂಡರಾದ ಜಯಶ್ರೀ ಗುರನ್ನವರ, ಕೃಷ್ಣಾ ಅಷ್ಟೇಕರ, ಮಾರುತಿ ಮಲಾಯಿ, ಉಮೇಶ ಹಲಗೇಕರ, ಪರಶುರಾಮ ಹಲಗೇಕರ, ಸಿದ್ದರಾಯಿ ಅಷ್ಟೇಕರ, ರೈತ ಮಹಿಳೆಯರು ಇದ್ದರು.