ಗೋಕಾಕ: ‘ರಾಜ್ಯ ಸರ್ಕಾರವು ಕೃಷಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಬೆಳೆಗೆ ನ್ಯಾಯಸಮ್ಮತ ಬೆಲೆ ಒದಗಿಸುವಂತೆ ಕೃಷಿಕರು ಹೋರಾಟ ನಡೆಸುತ್ತಿದ್ದರೆ, ಅದಕ್ಕೆ ತದ್ವಿರುದ್ಧವಾಗಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಆತಂಕಕಾರಿಯಾಗಿದೆ’ ಎಂದು ರೈತ ಮುಖಂಡ ಭೀಮಶಿ ಗದಾಡಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರೊಂದಿಗೆ ಬುಧವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.
‘ತಿದ್ದುಪಡಿಯಿಂದ ರೈತರ ಬದುಕು ಅತಂತ್ರಗೊಳ್ಳಲಿದೆ. ಸರ್ಕಾರಕ್ಕೆ ಕೃಷಿಕರ ಪರ ಕಾಳಜಿ ಇದ್ದಲ್ಲಿ ಕಾಯ್ದೆ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.