ಕಾಗವಾಡ: ‘ಬರುವ ಲೋಕಸಭಾ ಚುನಾವಣೆ ಫಲಿತಾಂಶ ನಂತರ ರಾಜ್ಯ ಸರ್ಕಾರ ಉಳಿಯುವ ಗ್ಯಾರಂಟಿ ಇಲ್ಲದಿರುವಾಗ ಈಗ ನೀಡುತ್ತಿರುವ ಪಂಚ ಗ್ಯಾರಂಟಿಯ ವಾರಂಟಿ ಮುಗಿಯುತ್ತದೆ’ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ತಾಲ್ಲೂಕಿನ ಶಿರುಗುಪ್ಪಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಕಾಂಗ್ರೆಸ್ ಶಾಸಕರೆ ನಮಗೆ ಅನುದಾನ ಸಿಗುತ್ತಿಲ್ಲಾ ಎಂದು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ರಾಜ್ಯದ ಹಲವು ಕಾಂಗ್ರೆಸ್ ಶಾಸಕರು ತಮ್ಮ ಅನುದಾನ ಸಿಗುತ್ತಿಲ್ಲಾ ಎಂದು ಅಸಮಾಧಾನರಾಗಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮಾಡಿ ಎನ್ನುವ ಜನರಿಗೆ ಉತ್ತರ ನೀಡಲಾಗದ ಪರಿಸ್ಥಿತಿ ರಾಜ್ಯದ ಕಾಂಗ್ರೆಸ್ ಶಾಸಕರದ್ದಾಗಿದೆ ಇದರಲ್ಲಿ ತಿಳಿಯುತ್ತದೆ’ ಎಂದರು.
‘ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕಾರ್ಯ ನಿಂತಿವೆ. ರೈತರಿಗೆ ಸರಿಯಾಗಿ ವಿದ್ಯುತ್ ನೀಡದೆ ಸತಾಯಿಸುತ್ತಿದ್ದಾರೆ. ಒಂದು ವಿದ್ಯುತ್ ಪರಿವರ್ತಕಕ್ಕೆ ಮೊದಲು ₹20 ಸಾವಿರ ಖರ್ಚು ಆಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದು ₹ 1.5 ಲಕ್ಷ ನೀಡಬೇಕಾಗಿದೆ. ಎಲ್ಲ ದಿನ ಬಳಕೆ ವಸ್ತುಗಳ ಬೆಲೆಗಳನ್ನು ಹೆಚ್ಚಿಗೆ ಮಾಡಿ ಜನ ಸಾಮನ್ಯರ ಮೇಲೆ ದೊಡ್ಡ ಮಟ್ಟದ ಹೊರೆ ಹಾಕಲಾಗುತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಮತ ನೀಡಿ ಮತ್ತೊಮ್ಮೆ ಮೋದಿಯವರ ಕೈ ಬಲಪಡಿಸಬೇಕು’ ಎಂದು ಹೇಳಿದರು.
ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ‘ಪ್ರಧಾನಿ ಮೋದಿ ಅವರು ಹತ್ತೇ ವರ್ಷಗಳಲ್ಲಿ ಜಗತ್ತೇ ಭಾತರದತ್ತ ತಿರುಗಿ ನೋಡುವ ಹಾಗೆ ಮಾಡಿದ್ದಾರೆ. ಜನ ಸಾಮಾನ್ಯರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ನನ್ನನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಿ’ ಎಂದು ಮನವಿ ಮಾಡಿದರು.
ಈ ವೇಳೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ ಮತಯಾಚಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಪ್ರಧಾನ ಕಾರ್ಯದರ್ಶಿ ದೀಪಕ ಪಾಟೀಲ, ನಿಂಗಪ್ಪ ಖೋಕಲೆ, ಶೀತಲ ಪಾಟೀಲ, ಶಿವಾನಂದ ಪಾಟೀಲ, ಸಂಜಯ ತೆಲಸಂಗ,ಅಭಯ ಅಕ್ಕಿವಾಟೆ, ತಮ್ಮಣ್ಣ ಪಾರಶೆಟ್ಟಿ, ಅರುಣ ಗಣೇಶವಾಡಿ, ಯೋಗೆಶ ಕುಂಬಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.