ಬೆಳಗಾವಿ: ನೀರಿನಲ್ಲಿ ಕೊಳೆತು ಹಾಳಾದ– ಹಾಳಾಗುತ್ತಿರುವ ಬೆಳೆಗಳು, ಹೋದ ವರ್ಷ ಆದ ನಷ್ಟದಿಂದ ಸುಧಾರಿಸಿ ಕೊಳ್ಳುವಷ್ಟರಲ್ಲೇ ಮತ್ತೊಂದು ಹೊಡೆತ, ಸಂಕಷ್ಟಕ್ಕೆ ಸಿಲುಕಿರುವ ರೈತರಿಂದ ನೆರವಿಗೆ ಕೋರಿಕೆ, ಮೂಲಸೌಕರ್ಯಗಳ ಹಾನಿಗೂ ಕಾರಣವಾದ ಮಳೆರಾಯ...
–ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುರಿಂದ ಉಂಟಾಗಿರುವ ಸಮಸ್ಯೆಗಳ ಚಿತ್ರಣಗಳಿವು. ಆಗಸ್ಟ್ನಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಆಗಿದ್ದ ನೋವಿನ ಮೇಲೆ ಸೆಪ್ಟೆಂಬರ್ ಮಳೆ ಉಪ್ಪು ಸುರಿದಿದೆ. ಪರಿಣಾಮ, ಕಟಾವಿಗೆ ಬಂದಿದ್ದ ಬೆಳೆಗಳು ಕೈಗೆ ಬಾರದೆ ಹಾಳಾಗಿದ್ದು, ಅಪಾರ ನಷ್ಟವಾಗಿದೆ. ಇದರಿಂದಾಗಿ ಅನ್ನದಾತರ ಕೈಗಳು ಪರಿಹಾರಕ್ಕಾಗಿ ಅಂಗಲಾಚುವ ಸ್ಥಿತಿ ಮತ್ತೊಮ್ಮೆ ಬಂದಿದೆ.
ಜೂನ್ 1ರಿಂದ ಆಗಸ್ಟ್ ಅಂತ್ಯದ ವರೆಗೆ 476 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 603 ಮಿ.ಮೀ. ಆಗಿದೆ. ಅಂದರೆ ಜಿಲ್ಲೆಯ ಸರಾಸರಿಯಲ್ಲಿ ಶೇ27ರಷ್ಟು ಹೆಚ್ಚಾಗಿದೆ. ರಾಯಬಾಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ 71ರಷ್ಟು ಮಳೆ ಬಿದ್ದಿದೆ. ನಂತರದ ಸ್ಥಾನದಲ್ಲಿ ಗೋಕಾಕ ಹಾಗೂ ಸವದತ್ತಿ ಇವೆ. ಅಂತೆಯೇ ಸೆಪ್ಟೆಂಬರ್ನಲ್ಲೂ ವಾಡಿಕೆಗಿಂತಲೂ ಹೆಚ್ಚಿನ ಮಳೆ ಸುರಿದಿದೆ. ಪರಿಣಾಮ, ಸೋಯಾಅವರೆ, ಹೆಸರು, ಮೆಕ್ಕೆಜೋಳ, ಹತ್ತಿ, ಕಬ್ಬು ಹಾಗೂ ಭತ್ತದ ಬೆಳೆಗಳು ಜಲಾವೃತವಾಗಿ ಕೊಳೆಯುತ್ತಿವೆ.
ಸಮೀಕ್ಷೆ ಪ್ರಗತಿಯಲ್ಲಿ: ಆಗಸ್ಟ್ನಲ್ಲಿ ಉಂಟಾದ ಪ್ರವಾಹದಿಂದ ₹1,702.49 ಕೋಟಿ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಕೇಂದ್ರ ತಂಡ ಅಧ್ಯಯನ ನಡೆಸಿ ಹೋಗಿದೆಯಾದರೂ ಇನ್ನೂ ಪರಿಹಾರ ಸಿಕ್ಕಿಲ್ಲ. ಇನ್ನೊಂದೆಡೆ, ಸೆಪ್ಟೆಂಬರ್ನಲ್ಲಿ ಸುರಿದ ಮಳೆಯಿಂದಾಗಿ ಆಗಿರುವ ಬೆಳೆ ಹಾನಿಯ ಜಂಟಿ ಸಮೀಕ್ಷೆ ಇನ್ನೂ ಪ್ರಗತಿಯಲ್ಲಿದೆ. ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕೂಡಲೇ ಸಮರ್ಪಕ ಪರಿಹಾರ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ 96,436 ಹೆಕ್ಟೇರ್ ಕೃಷಿ ಹಾಗೂ 3,479.6 ಹೆಕ್ಟೇರ್ ತೋಟಗಾರಿಕೆ ಸೇರಿ 99,912 ಹೆಕ್ಟೇರ್ ಬೆಳೆಗಳು ಹಾನಿಗೊಳಗಾಗಿವೆ. ಅಥಣಿ ಹಾಗೂ ಕಾಗವಾಡಕ್ಕಿಂತ ಉಳಿದ ತಾಲ್ಲೂಕುಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಸಮೀಕ್ಷೆ ಇನ್ನೂ ಪ್ರಗತಿಯಲ್ಲಿದೆ.
***
ಹಾನಿ ಅಂಕಿ ಅಂಶ
ಹಾನಿ;ಪ್ರಮಾಣ;ನಷ್ಟ (₹ ಕೋಟಿಗಳಲ್ಲಿ)
ಕೃಷಿ ಬೆಳೆ;96,436 ಹೆಕ್ಟೇರ್;1,334.03
ತೋಟಗಾರಿಕಾ ಬೆಳೆ;34,79.6 ಹೆಕ್ಟೇರ್;37.59
ಮನೆಗಳು;2,588;45.21
ರಸ್ತೆಗಳು;900.77 ಕಿ.ಮೀ.;207.36
ಸೇತುವೆಗಳು;134;63.57
ಕುಡಿಯುವ ನೀರು ಸರಬರಾಜು;48;0.81
ನೀರವಾರಿ ಯೋಜನೆ;28;2.48
ವಿದ್ಯುತ್ ಪೂರೈಕೆ;1,913 ವಿದ್ಯುತ್ ಕಂಬಗಳು;10.69
ಸರ್ಕಾರಿ ಕಟ್ಟಡಗಳು;6;0.18
ಟ್ಯಾಂಕ್ಗಳು;2;0.07
ನೀರು ಪೂರೈಕೆ;11;0.5
ಒಟ್ಟು ಹಾನಿ;...;1702.49
***
ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿದೆ. ಪರಿಣಾಮ ಬೆಳೆ ಹಾನಿಯಾಗಿದೆ. ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ
-ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ
***
ಹಾನಿ ಸಮೀಕ್ಷೆ ನಿಖರವಾಗಿ ನಡೆಸಲು ಸೂಚನೆ ನೀಡಿದ್ದೇನೆ. ಸಂತ್ರಸ್ತರು ಮತ್ತು ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು
-ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.