ಅಥಣಿ: ‘₹ 3 ಸಾವಿರ ಡೀಸೆಲ್ ಹಾಕಿಸುವಷ್ಟು ದುಸ್ಥಿತಿ ನನಗೆ ಬಂದಿಲ್ಲ. ದೇವರು ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ತುಂಬಾ ನೀಡಿದ್ದಾನೆ’ ಎಂದು ಸಾರಿಗೆ ಸಚಿವರೂ ಅಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ತಮ್ಮ ಖಾಸಗಿ ಕಾರಿಗೆ ಚಾಲಕ ಸರ್ಕಾರಿ ಡಿಪೊದಲ್ಲಿ ಡೀಸೆಲ್ ಹಾಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಹಾಗೆ ಡೀಸೆಲ್ ತುಂಬಿಸುವ ಅವಶ್ಯಕತೆ ನನಗಿಲ್ಲ. ಯಾರೋ ಬೇಕೆಂದೇ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ಮರದಲ್ಲಿ ಹಣ್ಣು ಇರುತ್ತದೆಯೋ ಆ ಮರಕ್ಕೆ ಕಲ್ಲುಗಳು ಬೀಳುತ್ತವೆ. ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.
ಪಟ್ಟಣದಲ್ಲಿ ಸಾರಿಗೆ ಹಾಗೂ ಪುರಸಭೆಯ ವಾಣಿಜ್ಯ ಮಳಿಗೆಯನ್ನು ಉದ್ಘಾಟಿಸಿದ ಅವರು, ‘ಸಾರಿಗೆ ಇಲಾಖೆ ನೌಕರರ ವಿವಿಧ ಬೇಡಿಕೆಯನ್ನು ಈಡೇರಿಸಲಾಗುವುದು. ಆದಷ್ಟು ಬೇಗನೆ 6ನೇ ವೇತನ ಜಾರಿ ಮಾಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.
‘ವಂಚನೆ ಪ್ರಕರಣದ ಆರೋಪಿ ಯುವರಾಜ್ (ಸ್ವಾಮಿ) ಜೊತೆ ವೈಯಕ್ತಿಕ ಪರಿಚಯ ಇಲ್ಲ. ಬಿಜೆಪಿಗೂ ಸಂಬಂಧವಿಲ್ಲ’ ಎಂದರು.
‘ಅಥಣಿ ಅಭಿವೃದ್ಧಿಗೆ ಹಂತ ಹಂತವಾಗಿ ಕ್ರಮ ವಹಿಸಲಾಗುವುದು. ಬೆಳಗಾವಿ ಜಿಲ್ಲೆ ವಿಭಜಿಸಿಬೇಕೆಂಬ ಬೇಡಿಕೆ ಬಹಳ ದಿನದಿಂದಲೂ ಇದೆ. ಗೋಕಾಕ, ಚಿಕ್ಕೋಡಿ ಮತ್ತು ಅಥಣಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂಬ ಕೂಗು ಇದೆ. ಆದರೆ ಸದ್ಯಕ್ಕೆ ಅದು ಆಗುವುದು ಕಷ್ಟ. ಬೆಳಗಾವಿಯ ಗಡಿ ಬಗ್ಗೆ ಬಗ್ಗೆ ಎಂಇಎಸ್ ಸುಪ್ರೀಂ ಕೋರ್ಟ್ನಲ್ಲಿ ವ್ಯಾಜ್ಯ ಹೂಡಿರುವುದರಿಂದ ಈಗ ಬೆಳಗಾವಿ ವಿಭಜಸಿವುದು ಕಷ್ಟದ ಕೆಲಸವಾಗಿದೆ’ ಎಂದು ಪ್ರತಿಕ್ರಿಯಿಸಿದರು.
ಶಾಸಕ ಮಹೇಶ ಕುಮಠಳ್ಳಿ, ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದಪ್ಪ ಮುದಕ್ಕನ್ನವರ, ಸಾರಿಗೆ ಇಲಾಖೆ ಅಧಿಕಾರಿ ಎಂ.ಎನ್. ಕೇರಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರೆ, ಮುಖಂಡರಾದ ಮಲ್ಲಿಕಾರ್ಜುನ ಅಂದಾನಿ, ನಿಂಗಪ್ಪ ನಂದೇಶ್ವರ, ಶಶಿಕಾಂತ ಸಾಳ್ವೆ, ಪ್ರದೀಪ ನಂದಗಾಂವ, ಮಲ್ಲೇಶ ಹುದ್ದಾರ ಇದ್ದರು.