ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮುಖ್ಯಮಂತ್ರಿ ಯಡಿಯೂರಪ್ಪಗೆ ಜ್ವರ, ಸುಸ್ತು, ಮಾತ್ರೆ ಸೇವಿಸಿ ಪ್ರಚಾರ

Last Updated 14 ಏಪ್ರಿಲ್ 2021, 17:01 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜ್ವರ ಮತ್ತು ಸುಸ್ತು ಕಾಣಿಸಿಕೊಂಡಿದ್ದು, ಮಾತ್ರೆ ಸೇವಿಸಿ ‍ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬುಧವಾರ ಮಧ್ಯಾಹ್ನ ಇಲ್ಲಿಗೆ ಬಂದ ಅವರು ಯುಕೆ–27 ಹೋಟೆಲ್‌ನಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ವಿಶ್ರಾಂತಿ ಪಡೆದರು. ವೈದ್ಯರ ಸಲಹೆ ಮೇರೆಗೆ ಮಾತ್ರೆ ತೆಗೆದುಕೊಂಡು ಅವರು ಮೂಡಲಗಿ ಹಾಗೂ ಗೋಕಾಕದಲ್ಲಿ ಪ್ರಚಾರ ನಡೆಸಿದರು ಎಂದು ಮೂಲಗಳು ತಿಳಿಸಿವೆ.

‘ಪ್ರಯಾಣದಿಂದ ಬಳಲಿದ್ದ ಮುಖ್ಯಮಂತ್ರಿ ಅವರಿಗೆ ಹೋಟೆಲ್‌ನಲ್ಲಿ ಬಿಮ್ಸ್ ಮತ್ತು ಕೆಎಲ್‌ಇ ವೈದ್ಯರು ಮಧ್ಯಾಹ್ನ ತಪಾಸಣೆ ನಡೆಸಿ, ಮಾತ್ರೆಗಳನ್ನು ನೀಡಿದ್ದರು. ಕೆಲ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಆಗ ಜ್ವರ ಇರಲಿಲ್ಲ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಮಾಹಿತಿ ನೀಡಿದರು.

‘ಮೂಡಲಗಿಯಿಂದ ಗೋಕಾಕಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗುವ ಕಾರ್ಯಕ್ರಮ ನಿಗದಿಯಾಗಿತ್ತು. ಕೊನೆ ಕ್ಷಣದಲ್ಲಿ ಅದನ್ನು ರದ್ದುಪಡಿಸಿ ರಸ್ತೆ ಮಾರ್ಗವಾಗಿ ಪಯಣಿಸಿದ ಅವರು ಹೆಚ್ಚು ಬಳಲಿದಂತೆ ಕಂಡುಬಂದರು. ಆ ನಡುವೆಯೂ ಗೋಕಾಕದಲ್ಲಿ ರೋಡ್ ಷೋ ನಡೆಸಿದರು. ಹಲವು ಮಾರ್ಗಗಳಲ್ಲಿ ತೆರಳಲು ಯೋಜಿಸಿದ್ದ ರೋಡ್ ಷೋ ಅನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ಮೊಟಕುಗೊಳಿಸಲಾಯಿತು. ಹಲವು ದಿನಗಳಿಂದ ಉಪ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಅವರಿಗೆ ವಿಶ್ರಾಂತಿ ಕೊರತೆಯಿಂದ ಸುಸ್ತು ಉಂಟಾಗಿದೆ ಮತ್ತು ಜ್ವರವೂ ಬಂದಿದೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ರಾತ್ರಿ ಹೋಟೆಲ್‌ಗೆ ವಾಪಸಾದ ಅವರಿಗೆ ವೈದ್ಯಕೀಯ ತಂಡ ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ನೀಡಿತು. ಅವರು ಬರುವುದಕ್ಕೆ ಮುನ್ನ ಆಸ್ಪತ್ರೆಗೆ ಹಲವು ಉಪಕರಣಗಳನ್ನು ತಂದು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT