ಬೆಳಗಾವಿ: ‘ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ನನ್ನ ಎರಡು ತಿಂಗಳ ಸಂಬಳ ₹ 72,000 ನೀಡಿದ್ದೇನೆ’ ಎಂದು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಹೇಳಿದರು.
ಇಲ್ಲಿನ ತಮ್ಮ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನಗೆ ಪ್ರತಿ ತಿಂಗಳು ಸರ್ಕಾರ ₹ 36,000 ಸಂಬಳ ನೀಡುತ್ತದೆ. ಜುಲೈ ಹಾಗೂ ಆಗಸ್ಟ್ ಎರಡು ತಿಂಗಳ ಸಂಬಳವನ್ನು ಪರಿಹಾರ ನಿಧಿಗೆ ನೀಡಿದ್ದೇನೆ’ ಎಂದು ತಿಳಿಸಿದರು.
₹100 ಕೋಟಿಗೆ ಮನವಿ:‘ಬೆಳಗಾವಿಯಲ್ಲಿ ವಾಡಿಕೆ ಮಳೆಗಿಂತ ಎರಡು ಪಟ್ಟುಹೆಚ್ಚು ಮಳೆಯಾಗಿದೆ. ನೂರಾರು ಮನೆಗಳು ಹಾನಿಗೊಳಗಾಗಿವೆ. ರಸ್ತೆಗಳು, ಚರಂಡಿಗಳು ಕೆಟ್ಟುಹೋಗಿವೆ. ಇವುಗಳನ್ನೆಲ್ಲ ದುರಸ್ತಿಪಡಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ₹ 100 ಕೋಟಿ ನೀಡಬೇಕು’ ಎಂದು ಕೋರಿದರು.