ಅಥಣಿ (ಬೆಳಗಾವಿ ಜಿಲ್ಲೆ): ‘ಜಡ್ಜ್ ಆದವರಿಗೆ ಪಟ್ಟೆವಾಲಾ ಆಗು ಬಾ ಎಂದರೆ ಹೇಗೆ? ನಾನು ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ?’ ಎಂದು ಶಾಸಕ ಲಕ್ಷ್ಮಣ ಸವದಿ ಪ್ರಶ್ನಿಸಿದರು.
‘ನಿಗಮ– ಮಂಡಳಿ ಹುದ್ದೆ ಸ್ವೀಕರಿಸುವಿರಾ’ ಎಂದು ಪಟ್ಟಣದಲ್ಲಿ ಸೋಮವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಾರಿ ಗೆದ್ದವರಲ್ಲಿ ಹಿರಿಯ ಕಾಂಗ್ರೆಸ್ಸಿಗರು ಹೆಚ್ಚಿದ್ದಾರೆ. ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ನಾನು ಈಗ ಬಂದವನು. ರಾಜಕಾರಣದಲ್ಲಿ ತಾಳ್ಮೆ, ಸಹನೆ ಬಹಳ ಮುಖ್ಯ. ಇಲ್ಲದಿದ್ದರೆ ರಾಜಕೀಯ ಮಾಡಲು ಆಗುವುದಿಲ್ಲ. ಸದ್ಯ ಮಂತ್ರಿ ಸ್ಥಾನಗಳು ಮುಗಿದಿವೆ. ನಿಗಮ– ಮಂಡಳಿ ಬಗ್ಗೆ ನನಗೇನೂ ಮಾಹಿತಿ ಇಲ್ಲ. ಈಗಾಗಲೇ ಜಡ್ಡ್ ಆದ ನಾನು ಪಟ್ಟೆವಾಲಾ ಆಗುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.
‘ಹೊರಗಡೆ ಎಲ್ಲವೂ ಊಹಾಪೋಹ ಕೇಳಿಬರುತ್ತಿವೆ. ಇದಕ್ಕೆ ಕೆಲವರು ರೆಕ್ಕೆ–ಪುಕ್ಕ ಕಟ್ಟಿ ಕಾಗೆ ಹಾರಿಸುತ್ತಿದ್ದಾರೆ. ನಾನು ಎರಡು ವರ್ಷದ ನಂತರ ಸಚಿವ ಆಗುತ್ತೇನೆ ಎಂಬ ಬಗ್ಗೆ ಯಾರ ಜೊತೆಗೂ ಮಾತುಕತೆ ಆಗಿಲ್ಲ. ಯಾರೂ ಆಶ್ವಾಸನೆ ಕೊಟ್ಟಿಲ್ಲ. ನಾನು ಬಿಸಿಲುಗುದುರೆ ನೋಡಿ ಓಡುವ ವ್ಯಕ್ತಿಯಲ್ಲ’ ಎಂದು ಹೇಳಿದರು.
‘ರಾಜಕೀಯದಲ್ಲಿ ಯಾರೂ ಸನ್ಯಾಸಿ ಅಲ್ಲ ಎಂದು ನಾನು ಹಿಂದೆ ಕೂಡ ಹೇಳಿದ್ದೇನೆ. ಶಾಸಕರಾದವರಿಗೆ ಮಂತ್ರಿ ಆಗುವುದು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಬೇಕೆಂಬ ಹಂಬಲ ಇರುತ್ತವೆ. ನನಗೂ ಇದೆ. ಕಾಯಬೇಕಾಗುತ್ತದೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.