‘ಸಹಕಾರ ಕಾರ್ಖಾನೆ ಖಾಸಗೀಕರಣ ಮಾಡುವುದು ದೂರದ ಮಾತು. ನಾವು ಇಲ್ಲಿ ಬಂದಿರುವುದು ಇದರ ಪುನಃಶ್ಚೇತನ ಮಾಡಲು’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರತಿಕ್ರಿಯಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು ‘ನಮಗೆ ಎರಡು ಖಾಸಗಿ ಸಕ್ಕರೆ ಕಾರ್ಖಾನೆ ಇವೆ. ರೈತರ ಆಶಾಕಿರಣ ಆಗಬೇಕು ಎನ್ನುವ ಭಾವನೆಯಿಂದ ಇಲ್ಲಿಗೆ ಬಂದಿದ್ದೇವೆ. ನಮಗೆ ಜನರು ಆಶೀರ್ವಾದ ಮಾಡಿದರೆ ಒಂದು ಗುರಿ ಇಟ್ಟುಕೊಂಡು ಕೆಲಸ ಮಾಡುತ್ತೇವೆ’ ಎಂದರು. ‘ನಾನು ಈ ತಾಲ್ಲೂಕಿನ ಮಗಳು. ನಮ್ಮ ದೊಡ್ಡಪ್ಪ ನಿರ್ದೇಶಕ ನಮ್ಮ ಮಾವನವರಾದ ಗುರುಸಿದ್ದಪ್ಪ ಹೆಬ್ಬಾಳಕರ ಸಂಸ್ಥಾಪಕ ನಿರ್ದೇಶಕ ಆಗಿದ್ದರು. ಕಿತ್ತೂರು ಬೈಲಹೊಂಗಲ ಖಾನಾಪುರ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಷೇರುದಾರರಿದ್ದಾರೆ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಖಾಸಗೀಕರಣ ಮಾಡುವ ಹುನ್ನಾರ’
ಮತದಾನ ಆರಂಭವಾದ ಕೆಲ ಹೊತ್ತಿನಲ್ಲಿ ಸ್ಥಳಕ್ಕಾಗಮಿಸಿದ ಸಚಿವೆ ಲಕ್ಚ್ಮೀ ಹೆಬ್ಬಾಳಕರ ಚನ್ನರಾಜ ಹಟ್ಟಿಹೊಳಿ ತಮ್ಮ ಪ್ಯಾನಲ್ ಬೆಂಬಲಿಸುವಂತೆ ಮತಕೇಂದ್ರದ ಪ್ರವೇಶದ ದ್ವಾರದ ಬಳಿನಿಂತು ರೈತರಿಗೆ ಮನವಿ ಮಾಡುತ್ತಿದ್ದರು. ಆಗ ಸ್ಥಳದಲ್ಲಿ ರೈತ ಸಂಘದ ಪ್ಯಾನಲ್ ಅಭ್ಯರ್ಥಿ ಆನಂದ ಹುಚ್ಚಗೌಡ್ರ ಅವರು. ‘ಇದು ರೈತರು ಕಟ್ಟಿದ ಕಾರ್ಖಾನೆ. ಇದನ್ನು ಉಳಿಸಿರಿ. ರಾಜಕೀಯ ವ್ಯಕ್ತಿಗಳಿಗೆ ಮತ ಹಾಕಬೇಡಿ. ಈಗ ಕೈ ಮುಗಿಯುತ್ತಾರೆ ನಂತರ ಕಾರ್ಖಾನೆ ಖಾಸಗೀಕರಣ ಮಾಡುತ್ತಾರೆ. ನೋಡಿಕೊಂಡ ಮತದಾನ ಮಾಡಿ’ ಎಂದು ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಎರಡೂ ಕಡೆಯ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಚನ್ನರಾಜ ಅವರು ಲಕ್ಷ್ಮೀ ಅವರನ್ನು ಸ್ಥಳದಿಂದ ಕರೆದುಕೊಂಡು ಹೋದರು.