ಬೆಳಗಾವಿ: ‘ಸಭೆಗೆ ನಗರಪಾಲಿಕೆ ಮಾಜಿ ಸದಸ್ಯರನ್ನು ಆಹ್ವಾನಿಸಬೇಕಿತ್ತು. ವಾರ್ಡ್ಗಳಲ್ಲಿನ ಸಮಸ್ಯೆಗಳು ಅವರಿಗೆ ಗೊತ್ತಿರುತ್ತವೆ’ ಎಂಬ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನಿಲುವಿಗೆ ಶಾಸಕರಾದ ಅಭಯ ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು.
‘ಎಲ್ಲ ಸಮಸ್ಯೆಗಳನ್ನೂ ನಾವೇ ಹೇಳುತ್ತೇವೆ. ನೀವು ಅವರನ್ನು ಕರೆಸಿ ಗೊಂದಲ ಉಂಟು ಮಾಡುವುದು ಬೇಡ. ಮುಂದೆ ಬಿಜೆಪಿಯಿಂದ ನಗರಪಾಲಿಕೆ ಚುನಾವಣೆ ಎದುರಿಸಬೇಕಾಗಿದೆ. ಹೀಗಾಗಿ, ನಮಗೆ ಸಮಸ್ಯೆ ಉಂಟು ಮಾಡಬೇಡಿ’ ಎಂದು ಅಭಯ ಹೇಳಿದರು.
‘ಅವರಲ್ಲಿ ಶೇ 90ರಷ್ಟು ಮಂದಿ ರಾಜಕಾರಣ ಮಾಡುವವರೇ ಆಗಿದ್ದಾರೆ. ಅವರು ಬಂದರೆ ಸಮಸ್ಯೆಯಾಗುತ್ತದೆ’ ಎಂದರು. ಇದಕ್ಕೆ ಅನಿಲ ಬೆನಕೆ ದನಿಗೂಡಿಸಿದರು. ನಗರದ ಸಮಸ್ಯೆಗಳನ್ನು ಗಮನಕ್ಕೆ ತಂದರು.
‘₹ 100 ಬಾಂಡ್ ಪೇಪರ್ ಮೇಲೆ ನಿವೇಶನ ಖರೀದಿಸಿರುವವರು, ಮನೆ ಕಟ್ಟಿರುವವರ ಸಮಸ್ಯೆ ಬಗೆಹರಿಸಬೇಕು. ಈಗಾಗಲೇ ನಿರ್ಮಿಸಿಕೊಂಡಿರುವವರಿಗೆ ತೊಂದರೆ ಕೊಡಬಾರದು. ಮುಂದೆ ಈ ವ್ಯವಹಾರ ನಡೆಯದಂತೆ ನೋಡಿಕೊಳ್ಳಬೇಕು’ ಎಂದು ಶಾಸಕರು ಒತ್ತಾಯಿಸಿದರು.
ಸಭೆಯಲ್ಲಿ ರಮೇಶ ಜಾರಕಿಹೊಳಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ‘ಪೌರ ಸನ್ಮಾನ’ ನೀಡಲಾಯಿತು.