ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತಾಶರಾದ ರೈತರಿಗೆ ನೋಟಿಸ್ ಕಿರುಕುಳ: ಸಾಲ ಮರುಪಾವತಿ ಅವಧಿ ಮುಂದೂಡದ ಸರ್ಕಾರ

Last Updated 19 ಮೇ 2021, 7:02 IST
ಅಕ್ಷರ ಗಾತ್ರ

ಬೆಳಗಾವಿ: ಬೆಳೆ ಹಾನಿ, ಕೋವಿಡ್ ಲಾಕ್‌ಡೌನ್‌, ಮಾರುಕಟ್ಟೆ ಬಂದ್, ಉತ್ಪನ್ನಗಳಿಗೆ ಬೆಲೆ ಕುಸಿತ ಮೊದಲಾದ ಕಾರಣಗಳಿಂದ ಕಂಗೆಟ್ಟಿರುವ ರೈತರಿಗೆ ಸಾಲ ಪಾವತಿಸುವಂತೆ ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಮತ್ತು ಫೈನಾನ್ಸ್ ಕಂಪನಿಗಳು ನೋಟಿಸ್ ಜಾರಿ ಮಾಡುತ್ತಿರುವುದು ಕಿರುಕುಳವಾಗಿ ಪರಿಣಮಿಸಿದೆ.

ಬೆಳೆ ಸಾಲ ಪಡೆದಿರುವ ರೈತರು ಮರುಪಾವತಿ ಮಾಡುವ ಅವಧಿಯನ್ನು ಸರ್ಕಾರ ಮುಂದೂಡದಿರುವುದರಿಂದ ಅನ್ನದಾತರು ಚಿಂತೆಯ ಸುಳಿಗೆ ಸಿಲುಕಿದ್ದಾರೆ.

ಸಹಕಾರ ಸಂಘಗಳಲ್ಲಿ ಪಡೆಯುವ ಬೆಳೆ ಸಾಲಕ್ಕೆ ಶೂನ್ಯ ಬಡ್ಡಿ ದರ ಇರುತ್ತದೆ. ಅದನ್ನು ವರ್ಷದೊಳಗೆ ಪಾವತಿಸಬೇಕು. ಅವಧಿ ಮೀರಿದಲ್ಲಿ ಶೇ 12.50ರಷ್ಟು ಬಡ್ಡಿಯೊಂದಿಗೆ ತುಂಬಬೇಕಾಗುತ್ತದೆ. ಸಾಮಾನ್ಯವಾಗಿ ಅವರು ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಈ ಅವಧಿಯಲ್ಲಿ ಸಾಲ ‍ಪಡೆದಿರುತ್ತಾರೆ. ಬಹುತೇಕರು ಸಾಲ ತೆಗೆದುಕೊಂಡು ವರ್ಷ ಸಮೀಪಿಸುತ್ತಿದೆ. ಪಾವತಿಸಬೇಕಾದ ಅನಿವಾರ್ಯತೆಯಲ್ಲಿದ್ದರೂ ಗಳಿಕೆ ಇಲ್ಲದೆ ಕಂಗಾಲಾಗಿದ್ದಾರೆ.

‘ನಿಗದಿತ ದಿನಾಂಕದೊಳಗೆ ಮರುಪಾವತಿಸದಿದ್ದಲ್ಲಿ ಶೂನ್ಯ ಬಡ್ಡಿ ರಿಯಾಯಿತಿ ಯೋಜನೆಯ ಸೌಲಭ್ಯ ದೊರೆಯುವುದಿಲ್ಲ. ಅವಧಿ ಮೀರಿದರೆ ಸಾಲ ಪಡೆದ ದಿನಾಂಕದಿಂದಲೇ ಶೇ 12.50ರಂತೆ ಬಡ್ಡಿ ಆಕರಿಸಲಾಗುವುದು. ನಿಯಮಾವಳಿ ಪ್ರಕಾರ ಸಾಲ ವಸೂಲಾತಿಗೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂಬ ತಿಳಿವಳಿಕೆ ಪತ್ರವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ನೀಡುತ್ತಿವೆ.

ಸಂಕಷ್ಟದಲ್ಲಿದ್ದೇವೆ:

ಜಿಲ್ಲಾ ಮಾರ್ಗದರ್ಶ ಬ್ಯಾಂಕ್‌ ಮಾಹಿತಿ ಪ್ರಕಾರ, ಆರ್‌ಬಿಐ ವ್ಯಾಪ್ತಿಯಲ್ಲಿರುವ ವಾಣಿಜ್ಯ ಬ್ಯಾಂಕ್‌ಗಳು, ಡಿಸಿಸಿ ಬ್ಯಾಕ್‌ ಹಾಗೂ ಗ್ರಾಮೀಣ ಬ್ಯಾಂಕ್‌ಗಳಿಂದ ರೈತರು ಕಳೆದ ಸಾಲಿನಲ್ಲಿ 6,71,476 ರೈತರು ₹ 6,208 ಕೋಟಿ ಬೆಳೆ ಸಾಲ ಪಡೆದಿದ್ದಾರೆ. ಇದಲ್ಲದೇ, ಅರ್ಬನ್‌ ಕೋ–ಆಪ್‌ ಬ್ಯಾಂಕ್, ಸೌಹಾರ್ದ ಸಹಕಾರಿಗಳಿಂದಲೂ ಬೆಳೆ ಸಾಲ ತೆಗೆದುಕೊಂಡಿರುವ ಸಾವಿರಾರು ಮಂದಿ ಇದ್ದಾರೆ. ಈಗ, ಮರುಪಾವತಿಗೆ ಸೂಚನೆಗಳು ಬರುತ್ತಿವೆ.

‘ಹೋದ ವರ್ಷವೂ ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದೆವು. ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆ ದೊರೆಯದೆ ಕಂಗಾಲಾಗಿದ್ದೇವೆ. ಕೋವಿಡ್‌ನಿಂದಾಗಿ ಬೆಲೆ ಕುಸಿತ ಉಂಟಾಗಿ ನಷ್ಟ ಅನುಭವಿಸಿದ್ದೇವೆ. ಹೀಗಿರುವಾಗ ಸಾಲ ಮರುಪಾವತಿಸುವಂತೆ ಸಹಕಾರ ಸಂಘ/ ಸೊಸೈಟಿಗಳಿಂದ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ಪಾವತಿಸಲಾಗದಿದ್ದರೆ ಹೊಸ ಸಾಲ ಪಡೆಯುವುದಕ್ಕೂ ತೊಂದರೆಯಾಗುತ್ತದೆ. ಮುಂಗಾರು ಹಂಗಾಮಿಗೆ ಸಿದ್ಧತೆಯಲ್ಲಿ ತೊಡಗಿರುವ ನಮಗೆ ಆರ್ಥಿಕ ಸಂಕಷ್ಟ ಎದುರಾಗಿದೆ’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ)ದ ಅಧ್ಯಕ್ಷ ಸಿದಗೌಡ ಮೋದಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅವಧಿ ವಿಸ್ತರಿಸಬೇಕು:

‘ಬೆಳೆ ಸಾಲ ಮನ್ನಾ ಮಾಡಬೇಕು. ಇಲ್ಲವೇ ಹೋದ ವರ್ಷದಂತೆ, ಮರುಪಾವತಿ ಅವಧಿ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

‘ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ಸಹಕಾರ ಸೊಸೈಟಿಗಳಲ್ಲಿನ ಸಾಲ ಮರುಪಾವತಿ ಅವಧಿ ವಿಸ್ತರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೇ ಇದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅನ್ನದಾತರ ನೆರವಿಗೆ ಬರಬೇಕಿದ್ದ ಕೃಷಿ ಸಚಿವರು ಏನು ಮಾಡುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ. ಕಬ್ಬು ಪೂರೈಸಿದವರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ₹ 640 ಕೋಟಿ ಕೊಡಿಸುವ ಕೆಲಸವೂ ಆಗಿಲ್ಲ. ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎನ್ನುವುದು ತಿಳಿಯದ ಸ್ಥಿತಿಯಲ್ಲಿದ್ದೇವೆ’ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ವಿ. ರಾಹುಲ್, ‘ಈ ಬಗ್ಗೆ ರೈತರೂ ವಿಚಾರಿಸುತ್ತಿದ್ದಾರೆ. ಆದರೆ, ಸಾಲ ಮರುಪಾವತಿ ಅವಧಿ ವಿಸ್ತರಣೆ ಬಗ್ಗೆ ಅಧಿಕೃತ ಆದೇಶ ಬಂದಿಲ್ಲ. ಕೋವಿಡ್ ಸಂಕಷ್ಟ ಎದುರಾಗಿರುವುದರಿಂದ ಹೋದ ವರ್ಷದಂತೆ ಈ ಬಾರಿಯೂ ಅವಧಿ ವಿಸ್ತರಣೆ ಸಾಧ್ಯತೆಗಳಿವೆ’ ಎಂದು ತಿಳಿಸಿದರು.

ಮುಖ್ಯಾಂಶಗಳು

ಶೇ 12.50ರಷ್ಟು ಬಡ್ಡಿ ತುಂಬಬೇಕಾದ ಆತಂಕ

ಬೆಲೆ ಕುಸಿತದಿಂದ ಸಂಕಷ್ಟ

ಕೋವಿಡ್‌ನಿಂದಾಗಿ ಗಳಿಕೆ ಇಲ್ಲ

ರೈತರೇನಂತಾರೆ?

ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಮೊದಲಾದ ‍‍ಪರಿಕರಗಳನ್ನು ಖರೀದಿಸಬೇಕು. ರಸಗೊಬ್ಬರ ಬೆಲೆ ಗಗನಕ್ಕೇರಿದೆ. ಗಳಿಕೆಯೇ ಇಲ್ಲದಿರುವಾಗ ಸಾಲ ಮರುಪಾವತಿ ಮಾಡುವುದು ಹೇಗೆ ಎನ್ನುವುದೇ ತಿಳಿಯದಾಗಿದೆ.
ಸಿದಗೌಡ ಮೋದಗಿ
ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ (ಸಂಯುಕ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT