ಬೆಳಗಾವಿ: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಪೌರತ್ವ (ತಿದ್ದುಪಡಿ) ಮಸೂದೆ ವಿರೋಧಿಸಿ ಇಲ್ಲಿನ ರಾಬಟಾ–ಇ–ಮಿಲತ್ ಸಂಘಟನೆ ನೇತೃತ್ವದಲ್ಲಿಮುಸ್ಲಿಮರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
‘ಲೋಕಸಭೆಯಲ್ಲಿ ಅನುಮೋದನೆಗೊಂಡು ರಾಜ್ಯಸಭೆಯಲ್ಲಿ ಮಂಡನೆಗೆ ಕಳುಹಿಸಿರುವ ನಾಗರಿಕ ತಿದ್ದುಪಡಿ ಮಸೂದೆಯನ್ನು ಕೈಬಿಡಬೇಕು. ಈ ಮಸೂದೆನಮ್ಮ ದೇಶದ ನೀತಿ, ಸಾಂವಿಧಾನಿಕ ಮನೋಭಾವ ಮತ್ತು ಜಾತ್ಯತೀತ ಆಶಯಗಳಿಗೆ ವಿರುದ್ಧವಾಗಿದೆ. ಮುಸ್ಲಿಮರನ್ನೇ ಗುರಿಯಾಗಿಟ್ಟುಕೊಂಡು ಈ ಮಸೂದೆಯಲ್ಲಿ ಧರ್ಮದ ಆಧಾರದ ಮೇಲೆ ದೇಶ ಒಡೆಯುವ ತಂತ್ರ ಅಡಗಿದೆ’ ಎಂದು ಆರೋಪಿಸಿದರು.
‘ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಮೂಲತತ್ವಕ್ಕೆ ವಿರುದ್ಧವಾಗಿದೆ. ದಶಕಗಳಿಂದ ಭಾರತದಲ್ಲಿ ನೆಲೆಸಿದ್ದರೂ ಒಂದು ಧರ್ಮಕ್ಕೆ ಸೇರಿದವರು, ಭಾರತೀಯ ಪೌರತ್ವ ಪಡೆಯುವಲ್ಲಿ ವಂಚಿತರಾಗುತ್ತಾರೆ. ಹೀಗಾಗಿ, ಇದನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ಉಪಾಧ್ಯಕ್ಷ ಮೌಲಾನಾ ಮಹ್ಮದ ಸಜೀದ, ಮೋಹಿನುದ್ದಿನ ಕಟಗೇರಿ, ಜನಾಬ ಸೌಖತ್, ಜನಾಬ ಸಹೀದ, ಮೌಲಾನಾ ಮುಸ್ತಾಕ, ಜನಾಬ್ ರಿಯಾಜ್ ಇದ್ದರು.