ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮುತ್ತಿಗೆ ಹಾಕಲು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ತಂಡೋಪ ತಂಡವಾಗಿ ಬರುತ್ತಿರುವುದರಿಂದ ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಇನ್ನೂರಕ್ಕೂ ಹೆಚ್ಚು ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಗೋಕಾಕದಿಂದ ವಾಹನಗಳಲ್ಲಿ ಜಾರಕಿಹೊಳಿ ಅಭಿಮಾನಿಗಳು ಬರುತ್ತಿದ್ದಾರೆ. ಈಗಾಗಲೇ ಒಂದಷ್ಟು ಮಂದಿ ಬಂದು ಸೇರಿದ್ದಾರೆ. ಅವರನ್ನು ಪೊಲೀಸರು ನಿಲ್ದಾಣ ಸಮೀಪದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದಾರೆ. ಅವರು ಶಿವಕುಮಾರ್ ಅವರಿಗೆ ಮುತ್ತಿಗೆ ಹಾಕಲು ಯೋಜಿಸಿದ್ದಾರೆ.
ರಮೇಶ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಮಾಡಿರುವ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ರಮೇಶಗೆ ಜೈಕಾರ ಹಾಕುತ್ತಿದ್ದಾರೆ.
ಡಿಕೆಶಿ ಬಂಧಿಸಿದರೆ ಶಾಂತಿ, ಇಲ್ಲವಾದರೆ ಕ್ರಾಂತಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ಗೋ ಬ್ಯಾಕ್ ಡಿಕೆಶಿ ಎಂದು ಕೂಗುತ್ತಿದ್ದಾರೆ.
ಡಿಸಿಪಿ ವಿಕ್ರಂ ಅಮಟೆ, ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ.
ಶಿವಕುಮಾರ್ ಮಧ್ಯಾಹ್ನ 3ಕ್ಕೆ ಬರುವ ವಿಮಾನದಲ್ಲಿ ಬಂದಿಳಿಯಲಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್ ಸ್ವಾಗತಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬಂದಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಅವರ ಪುತ್ರ ಮೃಣಾಲ್ ಹೆಬ್ಬಾಳಕರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಮೊದಲಾದವರು ಇದ್ದಾರೆ.