ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ದಟ್ಟ ಅರಣ್ಯದಲ್ಲಿ ವೃದ್ಧೆಯನ್ನು ಬಿಟ್ಟು ಹೋದ ಸಂಬಂಧಿಕರು

Last Updated 23 ಜನವರಿ 2023, 13:42 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಾವಗಾ ಗ್ರಾಮದ ಹೊರವಲಯದ ಅರಣ್ಯದಲ್ಲಿ 90 ವರ್ಷದ ವೃದ್ಧೆಯೊಬ್ಬರು ನಿತ್ರಾಣ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದಾರೆ. ಕುಟುಂಬದವರೇ ಅವರನ್ನು ಅರಣ್ಯದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಗ್ರಾಮದ ಜನ ತಿಳಿಸಿದ್ದಾರೆ.

ರುಮೇವಾಡಿ ಗ್ರಾಮದ ರೈತ ರಾಜು ಘಾಡಿ ಎನ್ನುವವರು ಸೋಮವಾರ ಕಾಡಿನ ದಾರಿಯಲ್ಲಿ ಹೊರಟಿದ್ದರು. ಆಗ ವೃದ್ಧೆ ನರಳುವುದು ಕೇಳಿಸಿತು. ಹತ್ತಿರ ಹೋಗಿ ನೋಡಿದ ಅವರು ಅಜ್ಜಿಗೆ ನೀರು ಕುಡಿಸಿ ಉಪಚರಿಸಿದರು. ತಮ್ಮ ಟ್ರ್ಯಾಕ್ಟರ್‌ನಲ್ಲಿ ಅವರನ್ನು ಹತ್ತಿರದ ಧಾಬಾಗೆ ಕರೆತಂದರು. ಧಾಬಾ ಮಾಲೀಕ ಅನಂತ ಜುಂಜವಾಡಕರ, ಉದಯ ಕೋಳೇಕರ ಅವರು ಆಂಬುಲೆನ್ಸ್‌ ಕರೆಸಿ, ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದರು.

ಒಳರೋಗಿಯಾಗಿ ದಾಖಲಿಸಿಕೊಂಡ ವೈದ್ಯರು ತುರ್ತು ಚಿಕಿತ್ಸೆ ನೀಡಿದರು. ವೃದ್ಧೆ ನಾಲ್ಕು– ಐದು ದಿನಗಳಿಂದ ಏನನ್ನೂ ತಿಂದಿಲ್ಲ, ನೀರೂ ಕುಡಿದಿಲ್ಲ. ತೀವ್ರ ನಿತ್ರಾಣಗೊಂಡ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ತಾನು ಮುಧೋಳದವಳು ಎಂದಷ್ಟೇ ಹೇಳಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ ತಿಳಿಸಿದರು.

ವೃದ್ಧೆ ಸಿಕ್ಕ ಸ್ಥಳವು ಗ್ರಾಮದಿಂದ 4 ಕಿ.ಮೀ ದೂರದಲ್ಲಿದೆ. ದಟ್ಟ ಅರಣ್ಯವಾದ್ದರಿಂದ ಜನ ಅತ್ತ ಸುಳಿದಾಡುವುದಿಲ್ಲ. ಮೈ ಕೊರೆಯುವ ಚಳಿಯಲ್ಲೇ ವೃದ್ಧೆ ನಲುಗಿದ್ದಾರೆ. ಇರುವೆ ಇತರ ಕ್ರಿಮಿಕೀಟಗಳು ಅವರನ್ನು ಕಚ್ಚಿ ಗಾಯ ಮಾಡಿವೆ. ಯಾವುದೇ ವನ್ಯಪ್ರಾಣಿ ದಾಳಿ ಮಾಡಿದ ಗುರುತು ಇಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ವೃದ್ಧೆಯನ್ನು ಬಿಟ್ಟುಹೋದ ಸ್ಥಳದಲ್ಲಿ ಅವರ ಬಟ್ಟೆ, ₹3,000 ಹಣ ಮಾತ್ರ ಸಿಕ್ಕಿದೆ. ಗುರುತಿನಚೀಟಿ, ವಿಳಾಸ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT