ತೆಲಸಂಗ: ‘ರಿಯಾಯಿತಿ ದರದಲ್ಲಿ ಕೃಷಿ ಇಲಾಖೆಯಿಂದ ವಿತರಿಸುವ ಬಿತ್ತನೆ ಬೀಜ ಪಡೆಯುವ ವೇಳೆ ನೂಕುನುಗ್ಗಲು ತಡೆಯುವ ನಿಟ್ಟಿನಲ್ಲಿ ಹಾಗೂ ರೈತರ ಹಿತ ಕಾಯುವುದಕ್ಕಾಗಿ ತೆಲಸಂಗ ಹೋಬಳಿಯೊಂದರಲ್ಲೇ 8 ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದುರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ಹೇಳಿದರು.
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕೋವಿಡ್–19 ವೈರಾಣುವಿನ ಭೀತಿ ಇರುವುದರಿಂದಾಗಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ರೈತರು ಗೊಂದಲಕ್ಕೆ ಒಳಗಾಗದೆ ಅಂತರ ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಸರದಿಯಲ್ಲಿ ನಿಂತು ಬೀಜ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
‘ಭಾನುವಾರ ತೆಲಸಂಗ ಹೋಬಳಿಯಲ್ಲಿ ಅಲ್ಪಪ್ರಮಾಣದಲ್ಲಿ ಮಳೆ ಸುರಿದಿದೆ. ಭೂಮಿ ಸಂಪೂರ್ಣ ಹಸಿಯಾಗುವ ಹೊರತು ಬಿತ್ತನೆಗೆ ಅವಸರ ಬೇಡ. ಭೂಮಿ ಪೂರ್ಣ ಪ್ರಮಾಣದ ಹಸಿ ಇಲ್ಲದೆ ಬಿತ್ತನೆ ಮಾಡಿದರೆ ಬೀಜ ಮೊಳಕೆ ಬಾರದೆ ತೊಂದರೆಗೆ ಸಿಲುಕಬೇಕಾಗುತ್ತದೆ. ಪ್ರತಿಯೊಬ್ಬ ಖಾತೆದಾರರಿಗೆ ನ್ಯಾಯಯುತವಾಗಿ ಬೀಜ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಇಲಾಖೆಯ ಅಧಿಕಾರಿಗಳ ಸಲಹೆ ಮೇರೆಗೆ ಕೃಷಿ ಮಾಡಿದರೆ ಹೆಚ್ಚಿನ ಅನುಕೂಲ ಆಗುತ್ತದೆ’ ಎಂದರು.
ಯುವ ಮುಖಂಡ ಧರೆಪ್ಪ ಮಾಳಿ ಮಾತನಾಡಿದರು. ಮುಖಂಡರಾದ ಮಾಯಪ್ಪ ನಿಡೋಣಿ, ಸಹಾಯಕ ಕೃಷಿ ಅಧಿಕಾರಿ, ಕೆ.ಡಿ. ಹುಣಸಿಕಟ್ಟಿ,ಮಹೇಶ ಕುಂಬಾರ, ರವಿ ದಳವಾಯಿ, ಅಂಬರೀಷ ಕಂದಾರೆ, ಎಂ.ಟಿ. ಕೊಡಗ, ದುರ್ಗಪ್ಪ ಕಾಣಿ, ಪವನ ಶಿಂಧೆ ಇದ್ದರು.