ಅಥಣಿ: ‘ಸರಿಯಾಗಿ ಕೆಲಸ ಮಾಡು’ ಎಂದು ಹೇಳಿದ್ದಕ್ಕೆ ತಹಶೀಲ್ದಾರ್ ದುಂಡಪ್ಪಾ ಕೋಮಾರ ಅವರಿಗೆ ಸಬ್ ರಿಜಿಸ್ಟ್ರಾರ್ ಪಿ.ಧನುರಾಜ್ ಧಮ್ಕಿ ಹಾಕಿ, ಹಲ್ಲೆ ಮಾಡಲು ಮುಂದಾದ ‘ಅಧಿಕಾರಿಗಳ ಜಗಳ’ದ ವಿಡಿಯೊವೊಂದು ವಾಟ್ಸ್ ಆ್ಯಪ್ನಲ್ಲಿ ಹರಿದಾಡುತ್ತಿದೆ.
ಶುಕ್ರವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಲವು ದಿನಗಳಿಂದ ತಮ್ಮ ಕೆಲಸಕ್ಕಾಗಿ ಓಡಾಡುತ್ತಿದ್ದ ಸೈನಿಕೊಬ್ಬನ ಕೆಲಸ ಮಾಡಿಕೊಡು ಎಂದು ದುಂಡಪ್ಪಾ ಕೋಮಾರ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಧನುರಾಜ್, ‘ನನ್ನ ಕೆಲಸ ನಾನು ಮಾಡುತ್ತೇನೆ. ನೀನ್ಯಾರು ನನಗೆ ಹೇಳೊಕೆ?’ ಎಂದು ನೇರವಾಗಿ ಧಮ್ಕಿ ಹಾಕಿದ್ದಾರೆ.
ಅಲ್ಲದೇ, ತಹಶೀಲ್ದಾರ್ ಮೇಲೆ ಹಲ್ಲೆ ಮಾಡುವಷ್ಟು ವಿಕೋಪಕ್ಕೆ ಹೋಗಿದ್ದ ಜಗಳವನ್ನು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನ್ನವರ ತಿಳಿಗೊಳಿಸಲು ಪ್ರಯತ್ನಿಸಿದರು.
ಹಲವು ದಿನಗಳಿಂದಲೂ ಸಬ್ ರಿಜಿಸ್ಟ್ರಾರ್ ಅವರ ಮೇಲೆ ಇಂತಹ ಆರೋಪಗಳು ಬರುತ್ತಿದ್ದವು. ಆದರೆ ಇದರ ಬಗ್ಗೆ ಯಾವ ಅಧಿಕಾರಿಗಳೂ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನಲಾಗಿದೆ. ಆದರೆ ಈಗ ತಹಶೀಲ್ದಾರ್ ಅವರ ಮೇಲೆ ಸಿಟ್ಟಿಗೆದ್ದ ವಿಡಿಯೊ ವೈರಲ್ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ಕುರಿತು ತಹಶೀಲ್ದಾರ್ ದುಂಡಪ್ಪಾ ಕೋಮಾರ ಅವರನ್ನು ‘ಪ್ರಜಾವಾಣಿ‘ ಸಂಪರ್ಕಿಸಿದಾಗ ತಾವೇನೂ ಪ್ರತಿಕ್ರಿಯಿಸುವುದಿಲ್ಲ ಎಂದರು.