ಅಥಣಿ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಸಂಗೀತ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿಬೆಳಗಾವಿ ಜಿಲ್ಲಾ ಗಾನಯೋಗಿ ಸಂಗೀತ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ನವನಾಥ ನಿಕ್ಕಂ ನೇತೃತ್ವದಲ್ಲಿ ಸದಸ್ಯರು ಇಲ್ಲಿನ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
‘ಶಿಕ್ಷಣದ ಎಲ್ಲಾ ಹಂತಗಳಲ್ಲೂ ಸಂಗೀತ ಶಿಕ್ಷಣವಿರಬೇಕು. ಸಂಸ್ಕೃತ ಮತ್ತು ಉರ್ದು ಪಾಠಶಾಲೆಗಳಂತೆ ಸಂಗೀತ ಮತ್ತು ನೃತ್ಯ ಕಲಾ ಪಾಠ ಶಾಲೆಗಗೂ ಸರ್ಕಾರ ಅನುದಾನ ನೀಡಬೇಕು. ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಗೀತ ನೃತ್ಯ ಪಾಠ ಶಾಲೆಗಳಿಗೆ ಕಡಿವಾಣ ಹಾಕಬೇಕು. ಸಂಗೀತ ಶಿಕ್ಷಕರ ನೇಮಕಾತಿಯಲ್ಲಿ ತಾಳ ವಾದ್ಯ ಮತ್ತು ವಾದ್ಯ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ವಕೀಲ ಕೆ.ಎಲ್. ಕುಂದರಗಿ ಮಾತನಾಡಿ, ‘ಸರ್ಕಾರವೇ ಸಂಗೀತ ವಿಷಯದ ಪದವೀಧರರಿಗೆ ನ್ಯಾಯ ಒದಗಿಸಬೇಕು. ನೇಮಕಾತಿ ಮಾಡಿಕೊಳ್ಳುವ ಮೂಲಕ ಅವರ ಬದುಕಿಗೆ ಆಧಾರವಾಗಬೇಕು’ ಎಂದು ಕೋರಿದರು.
ಉಪ ತಹಶೀಲ್ದಾರ್ ಬಿರಾದಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.