ಬೆಳಗಾವಿ: ‘ನಾವು ಯಾರ ವಿರೋಧಿಗಳಲ್ಲ. ನಮ್ಮ ಧರ್ಮದ ಬಗ್ಗೆ ತಿಳಿಯದವರಿಗೆ ತಿಳಿಸುವ ಕೆಲಸವನ್ನು ಸಂಘಟನೆಯಿಂದ ಮಾಡುತ್ತಿದ್ದೇವೆ’ ಎಂದುವಿಶ್ವ ಹಿಂದೂ ಪರಿಷತ್–ಬಜರಂಗ ದಳ ಕರ್ನಾಟಕ ಉತ್ತರ ಪ್ರಾಂತ ಸಂಘಟನಾ ಮಂತ್ರಿ ಮನೋಹರ ಮಠದ ಹೇಳಿದರು.
ಇಲ್ಲಿನ ಮಹಾಂತೇಶ ನಗರದ ಮಹಾಂತ ಭವನದಲ್ಲಿ ವಿಶ್ವ ಹಿಂದೂ ಪರಿಷತ್–ಬಜರಂಗ ದಳದಿಂದ ಈಚೆಗೆ ಆಯೋಜಿಸಿದ್ದ ‘11 ಪ್ರಖಂಡಗಳ 4 ಸಮಿತಿಗಳ ಜವಾಬ್ದಾರಿ ಘೋಷಣಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಘಟನೆಯು ಧರ್ಮ ರಕ್ಷಿಸುವ ಕೆಲಸವನ್ನು ಮಾಡುತ್ತಿದೆ. ಹೋರಾಟಗಳ ಮೂಲಕ ದೇಶದಲ್ಲಿ ಅನೇಕ ಬದಲಾವಣೆಗಳನ್ನು ತರಲು ಶ್ರಮಿಸುತ್ತಿದೆ. ನಾವೇನಾದರೂ ಪಡೆದುಕೊಳ್ಳಬೇಕಾದರೆ ಕ್ರಾಂತಿ ಆಗಲೇಬೇಕು. ನಮ್ಮ ಉದ್ದೇಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು’ ಎಂದು ತಿಳಿಸಿದರು.
ನಗರ ಘಟಕದ ಅಧ್ಯಕ್ಷ ಬಸವರಾಜ ಬಾಗೋಜಿ ಮಾತನಾಡಿ, ‘ಸನಾತನ ಧರ್ಮದಲ್ಲಿರುವ ಪೂಜಾ ಕಾರ್ಯಗಳು ವೈಜ್ಞಾನಿಕವಾಗಿವೆ’ ಎಂದು ತಿಳಿಸಿದರು.
‘ದೇಶವನ್ನು ಅಖಂಡ ಮಾಡುವ ಸಂಕಲ್ಪವನ್ನು ನಾವೆಲ್ಲರೂ ಹೊಂದಬೇಕು. ದೇಶವನ್ನು ವಿಶ್ವ ಗುರು ಮಾಡಲು ಹೋರಾಡಬೇಕು’ ಎಂದರು.
ನಗರ ಘಟಕದ ಕಾರ್ಯದರ್ಶಿ ಹೇಮಂತ ಹವಳ, ‘ಎಲ್ಲರನ್ನೂ ಒಗ್ಗೂಡಿಸಿಕೊಂಡು ಜೋಡಿಸುತ್ತಾ ಹೋಗುವುದೇ ಸಂಘದ ಉದ್ದೇಶ’ ಎಂದು ತಿಳಿಸಿದರು.
ಪ್ರಾಂತ ಕೋಶಾಧ್ಯಕ್ಷ ಕೃಷ್ಣಭಟ್ ಮಾತನಾಡಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ವಿಜಯ ಜಾಧವ್ ಪ್ರಖಂಡಗಳ ಜವಾಬ್ದಾರಿಗಳನ್ನು ಘೋಷಿಸಿದರು.
ಸಂಯೋಜಕ ಭಾವುಕಣ್ಣ ಲೋಹಾರ, ವಿಭಾಗೀಯ ಸಹ ಕಾರ್ಯದರ್ಶಿ ಅಚ್ಯುತ ಕುಲಕರ್ಣಿ ಇದ್ದರು.
ಆನಂದ ಕರಲಿಂಗಣ್ಣವರ ಸ್ವಾಗತಿಸಿದರು. ಬಸವರಾಜ ಹಳಂಗಳಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.