ಬೆಳಗಾವಿ: ಇಲ್ಲಿನ ವಡಗಾವಿಯ ದೇವಾಂಗ ನಗರದಲ್ಲಿ ಯುವ ನೇಕಾರರೊಬ್ಬರು ಮಗ್ಗದ ಬಳಿಯೇ ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂತೋಷ್ ಶಂಕರ್ ಢಗೆ (35) ಮೃತರು.
ಅವರಿಗೆ ತಂದೆ, ತಾಯಿ, ಪತ್ನಿ ಇದ್ದಾರೆ.
‘ಕೋವಿಡ್–19 ಲಾಕ್ಡೌನ್ ಕಾರಣದಿಂದ ಕೆಲಸವಿಲ್ಲದೆ ಮತ್ತು ಆದಾಯವಿಲ್ಲದೆ ಅವರಿಗೆ ಆರ್ಥಿಕ ಸಂಕಷ್ಟ ಉಂಟಾಗಿತ್ತು. ಇದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪತ್ನಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮೃತರ ಕುಟುಂಬದವರಿಗೆ ₹ 10 ಲಕ್ಷ ಪರಿಹಾರ ನೀಡಬೇಕು. ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ನೇಕಾರರ ಸೇವಾ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಎರಡು ಗುಂಪುಗಳ ನಡುವೆ ಗಲಾಟೆ
ಬೆಳಗಾವಿ: ಹೊರವಲಯದ ಗಣೇಶಪುರದಲ್ಲಿ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
‘ದೇಸೂರಕರ ಕುಟುಂಬದೊಂದಿಗೆ ಇನ್ನೊಂದು ಗುಂಪಿನವರು ಜಗಳವಾಡಿದ್ದಾರೆ. ಕೆಲವರು ತಲ್ವಾರ್, ಕಟ್ಟಿಗೆಗಳನ್ನು ಹಿಡಿದಿದ್ದರು. ಖಾರದ ಪುಡಿ ಎರಚಿ ಹೊಡೆದಾಡಿದರು’ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು.