ಬಳ್ಳಾರಿ: 31ರ ವರೆಗೆ ಸಂಪೂರ್ಣ ಲಾಕ್ ಡೌನ್ ವಿಸ್ತರಣೆ ಮಾಡಿರುವ ಜಿಲ್ಲಾಡಳಿತ ಮೇ 24 ಮತ್ತು 25 ರಂದು ಮಧ್ಯಾಹ್ನ 12 ಗಂಟೆಯವರೆಗೆ ದಿನಬಳಕೆ ವಸ್ತುಗಳ ಖರೀದಿಗೆ ಅವಕಾಶ ನೀಡಿರುವುದಿಂದ ಎಲ್ಲೆಡೆ ನೂಕು ನುಗ್ಗಲು ಏರ್ಪಟ್ಟಿತ್ತು.
ಹಣ್ಣು ತರಕಾರಿಗಳ ದರ ನಿಗದಿ ಮಾಡಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹೊರಡಿಸಿದ್ದ ಆದೇಶಕ್ಕೆ ಬಹುತೇಕ ಚಿಲ್ಲರೆ ತರಕಾರಿ ವ್ಯಾಪಾರಿಗಳು ಕಿಮ್ಮತ್ತು ನೀಡದೆ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರು.
ಬೀನ್ಸ್ ಪ್ರತಿ ಕೆಜಿಗೆ ಜಿಲ್ಲಾಧಿಕಾರಿಯು ₹ 50 ನಿಗದಿ ಮಾಡಿದ್ದರೆ ಮಾರಾಟಗಾರರು ₹ 200 ಕ್ಕೆ ಮಾರಿದರು. ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ್ದರಿಂದ ಬಹಳಷ್ಟು ತರಕಾರಿಗಳ ಬೆಲೆ ಮೂರ್ನಾಲ್ಕು ಪಟ್ಟು ಹೆಚ್ಚಿತ್ತು.
ತಾತ್ಕಾಲಿಕ ಮಾರುಕಟ್ಟೆಗಳಲ್ಲಿ ಜನ ಪರಸ್ಪರ ಅಂತರ ಮರೆತು ಹಣ್ಣು- ತರಕಾರಿ ಖರೀದಿಸಿದರು. ಜನರ ಗುಂಪುಗೂಡುವಿಕೆಯನ್ನು ನಿಯಂತ್ರಿಸಲಾಗದೆ ಪೊಲೀಸರು ಪರದಾಡಿದರು.
ನಗರದ ಸೂಪರ್ ಮಾರ್ಕೆಟ್ ಗಳಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಿದ್ದರಿಂದ ನೂರಾರು ಜನರು ಉದ್ದನೆಯ ಸಾಲಿನಲ್ಲಿ ಗಂಟೆಗಟ್ಟಳೆ ಕಾಯಬೇಕಾಯಿತು.
ನಗರದ ಪ್ರಮುಖ ರಸ್ತೆ- ವೃತ್ತಗಳಲ್ಲಿ ವಾಹನ ಸಂಚಾರ ಹೆಚ್ಚಿತ್ತು.
ಜೋಡಿ ರಸ್ತೆಗಳಲ್ಲಿ ಒಂದು ರಸ್ತೆಯನ್ನು ಮುಚ್ಚಿ, ಇನ್ನೊಂದು ರಸ್ತೆಯಲ್ಲಿ ಮಾತ್ರ ದ್ಚಿಮುಖ ಸಂಚಾರಕ್ಕೆ ಅನುವು ಮಾಡಿದ್ದರಿಂದ ಹಲವೆಡೆ ವಾಹನ ಸವಾರರು ತೊಂದರೆ ಅನುಭವಿಸಿದರು.