ಹೊಸಪೇಟೆ(ವಿಜಯನಗರ): ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮದುವೆ ಸೇರಿದಂತೆ ಇತರೆ ಶುಭ ಸಮಾರಂಭಗಳನ್ನು ನಿರ್ಬಂಧಿಸಿರುವುದರಿಂದ ಮಂಗಳವಾರ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಪಾಸ್ ವಿತರಣೆ ಸ್ಥಗಿತಗೊಳಿಸಲಾಗಿದೆ.
ಸೋಮವಾರ ಸರತಿ ಸಾಲಿನಲ್ಲಿ ನಿಂತುಕೊಂಡು ಜನ ಪಾಸ್ಗಳನ್ನು ಪಡೆದುಕೊಂಡಿದ್ದರು. ಮಂಗಳವಾರವೂ ಪಾಸ್ ಪಡೆಯಲು ಬಂದಿದ್ದರು. ಆದರೆ, ಜಿಲ್ಲಾಧಿಕಾರಿ ಆದೇಶದ ಪ್ರತಿ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಅಂಟಿಸಿರುವುದನ್ನು ನೋಡಿ ಹಿಂತಿರುಗಿದರು.
‘ಮೇ 13ರಂದು ಕೂಡ್ಲಿಗಿಯಲ್ಲಿ ಮದುವೆ ನಿಶ್ಚಯವಾಗಿದೆ. ಈಗಾಗಲೇ ಪಾಸ್ ಸಹ ಕೂಡ್ಲಿಗಿ ತಾಲ್ಲೂಕು ಆಡಳಿತದಿಂದ ಪಡೆದಿರುವೆ. ಈಗ ಹೊಸಪೇಟೆಯಿಂದ ಕೂಡ್ಲಿಗಿಗೆ ತೆರಳಲು ಅವಕಾಶ ಇಲ್ಲವೆಂದು ಹೇಳುತ್ತಿದ್ದಾರೆ. ಏನು ಮಾಡುವುದು ತೋಚುತ್ತಿಲ್ಲ’ ಎಂದು ಮದುವೆ ಪಾಸ್ ಪಡೆದ ಗಿಂಜಿ ಚಂದ್ರು ಗೋಳು ತೋಡಿಕೊಂಡರು.
ಈ ಮೊದಲು ಜಿಲ್ಲಾಡಳಿತವು 50 ಜನರೊಂದಿಗೆ ಮದುವೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತ್ತು. ನಂತರ ಆ ಸಂಖ್ಯೆ 40ಕ್ಕೆ ಇಳಿಸಿತ್ತು. ಈಗ ಸಂಪೂರ್ಣ ನಿರ್ಬಂಧ ಹೇರಲಾಗಿದೆ.