ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೂಪಕ, ರಂಗಕರ್ಮಿಗೆ ರಂಗ ಪ್ರಶಸ್ತಿ ಗರಿ

Last Updated 5 ಫೆಬ್ರುವರಿ 2021, 13:14 IST
ಅಕ್ಷರ ಗಾತ್ರ

ಹೊಸಪೇಟೆ: ಮಾ.ಬ. ಸೋಮಣ್ಣ ಎಂದರೆ ಥಟ್ಟನೆ ನೆನಪಾಗುವುದು ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುವ ಧ್ವಜಾರೋಹಣ ಸಮಾರಂಭ. ಕಳೆದ 25 ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ಅವರು ಎಲ್ಲರಿಗೂ ಅದರ ಮೂಲಕವೇ ಹೆಚ್ಚು ಚಿರಪರಿಚಿತರು.

ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರೊಬ್ಬ ರಂಗಕರ್ಮಿಯೂ ಹೌದು. ಆದರೆ, ಹೆಚ್ಚಿನವರಿಗೆ ಅವರೊಬ್ಬರು ನಿರೂಪಕರಾಗಿಯೇ ಹೆಚ್ಚು ಪರಿಚಯ. ಕಾರಣವಿಷ್ಟೇ ಎಲ್ಲ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳ ನಿರೂಪಣೆಯ ಹೊಣೆ ಅವರಿಗೆ ವಹಿಸುತ್ತ ಬಂದಿರುವುದು. ನಿರರ್ಗಳವಾಗಿ ಕನ್ನಡ ಮಾತಾಡಬಲ್ಲ ಅವರನ್ನು ಅವರ ಕಂಠಸಿರಿಯ ಮೂಲಕವೇ ಜನ ಅವರನ್ನು ನೋಡದೆ ದೂರದಿಂದಲೇ ಗುರುತಿಸುತ್ತಾರೆ. ಅಷ್ಟರಮಟ್ಟಿಗೆ ಜನಜನಿತರಾಗಿದ್ದಾರೆ.

ತಾಲ್ಲೂಕಿನ ಜಿ. ನಾಗಲಾಪುರದಲ್ಲಿ ಜನಿಸಿರುವ ಸೋಮಣ್ಣನವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ನಾಟಕ, ಕಾವ್ಯ ರಚನೆ, ನಿರ್ದೇಶನ, ನಟನೆ, ತಬಲಾ ವಾದನ, ಹಾರ್ಮೋನಿಯಂ ನುಡಿಸುವ ಕಲೆ ಕರಗತ. 600ಕ್ಕೂ ಹೆಚ್ಚು ರಂಗಗೀತೆಗಳನ್ನು ರಚಿಸಿದ್ದಾರೆ. ಶಿಕ್ಷಕ ವೃತ್ತಿಯ ಜೊತೆಗೆ ರಂಗಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತ ಬಂದವರು. ಹಗಲಿನಲ್ಲಿ ಶಾಲೆಗೆ ಹೋಗಿ ಪಾಠ ಮಾಡಿ ಬಂದರೆ, ಸಂಜೆಯಾದ ನಂತರ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ರಂಗಭೂಮಿ ಬಗ್ಗೆ ಅವರ ಸೆಳೆತ ಎಂತಹದ್ದು ಎನ್ನುವುದು ಇದರಿಂದ ಅರಿಯಬಹುದು. 2012ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ನಂತರ ಸಂಪೂರ್ಣವಾಗಿ ಅದಕ್ಕೆ ಸಮಯ ಮೀಸಲಿಟ್ಟರು.

‘ವೀರಕೇಸರಿ’, ‘ದೈವಸಂಗಮ’, ‘ವಿದ್ಯಾವಂತ’, ‘ಶಿವನೊಲುಮೆಯ ಶಿಶು’, ‘ಸಮರ್ಪಣ’, ‘ಬಲಿ’, ‘ಇಂಗುತಿಂದ ಮಂಗ’, ‘ಕುಸುಮ ಊರುಕೇರಿ’ ಅವರ ಪ್ರಮುಖ ಕೃತಿಗಳು. ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗಳೆರಡರಲ್ಲಿ ಕೆಲಸ ಮಾಡಿದ ಅಪಾರ ಅನುಭವ ಹೊಂದಿದ್ದಾರೆ. ಇವರ ಸಾಹಿತ್ಯ ಕೃಷಿಯನ್ನು ಗಮನಿಸಿ ಕನ್ನಡ ಸಾಹಿತ್ಯ ಪರಿಷತ್ತು, 2017ರಲ್ಲಿ ತಾಲ್ಲೂಕಿನ ಕಮಲಾಪುರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿತ್ತು.

ತಾಲ್ಲೂಕಿನ ಮರಿಯಮ್ಮನಹಳ್ಳಿ ಲಲಿತ ಕಲಾ ರಂಗ ಸಂಸ್ಥಾಪಕ ಸದಸ್ಯರಲ್ಲಿ ಸೋಮಣ್ಣ ಕೂಡ ಒಬ್ಬರು. ಈಗ ಆ ಸಂಸ್ಥೆಗೆ 34 ವರ್ಷ. ವಯಸ್ಸು 69 ಆದರೂ ಸದಾ ಲವಲವಿಕೆಯಿಂದ ಇರುವ ಸೋಮಣ್ಣನವರು, ಮರಿಯಮ್ಮನಹಳ್ಳಿಯ ರಂಗಭೂಮಿ ಕಲಾವಿದರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ. ಅವರ ರಂಗಭೂಮಿಯ ಹೆಚ್ಚಿನ ಚಟುವಟಿಕೆಯ ಕೇಂದ್ರ ಕೂಡ ಹೌದು.

ರಂಗಭೂಮಿಯಲ್ಲಿ ಅವರು ಸಲ್ಲಿಸಿದ ಹಿರಿದಾದ ಸೇವೆಯನ್ನು ಪರಿಗಣಿಸಿ ಕರ್ನಾಟಕ ನಾಟಕ ಅಕಾಡೆಮಿಯು 2020ನೇ ಸಾಲಿನ ವಾರ್ಷಿಕ ರಂಗ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ₹25,000 ನಗದು, ಪ್ರಮಾಣ ಪತ್ರ, ಸ್ಮರಣಿಕೆ ಒಳಗೊಂಡಿದೆ. ಮಾರ್ಚ್‌ನಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

***

ಇಲ್ಲಿಯವರೆಗೆ ಮಾಡಿದ್ದು ಸ್ವಲ್ಪ. ಈ ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ. ಇನ್ನೂ ಸಾಕಷ್ಟು ಮಾಡುವ ಹೊಣೆ ವಹಿಸಿದೆ. ರಂಗಭೂಮಿ ಚಟುವಟಿಕೆ ನಿಂತು ಹೋಗಿವೆ. ಅದು ಮತ್ತೆ ಆರಂಭಗೊಂಡು, ಹಿಂದಿನ ಗತವೈಭವಕ್ಕೆ ಹೋಗಬೇಕು. ಆ ನಿಟ್ಟಿನಲ್ಲಿ ನಾನು ಸೇರಿದಂತೆ ಎಲ್ಲರೂ ಕೆಲಸ ಮಾಡಬೇಕಿದೆ.

–ಮಾ.ಬ. ಸೋಮಣ್ಣ, ರಂಗಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT