ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಶಿಕ್ಷಕನ ಹಣ್ಣು‌ ಕೃಷಿ: ಎರಡು ಎಕರೆಯಲ್ಲಿ ತರಹೇವಾರಿ ಬೆಳೆ

Last Updated 27 ಮೇ 2022, 20:15 IST
ಅಕ್ಷರ ಗಾತ್ರ

ಕೂಡ್ಲಿಗಿ: ಎರಡು ಎಕರೆ ಜಮೀನಿನಲ್ಲಿ ತರಹೇವಾರಿ ಹಣ್ಣುಗಳನ್ನು ಬೆಳೆದು ಅದರ ಮೂಲಕ ಆದಾಯದ ದಾರಿಯನ್ನು ಕಂಡುಕೊಂಡಿದ್ದಾರೆ ಪಟ್ಟಣದ ನಿವೃತ್ತ ಶಿಕ್ಷಕ ಬಿ. ಮೊಹಮ್ಮದ್‌ ಶಫಿವುಲ್ಲಾ.

ನಿವೃತ್ತಿ ಎಂಬುದು ಬಹುತೇಕರಿಗೆ ವಿಶ್ರಾಂತ ಜೀವನದ ದಾರಿ. ಆದರೆ, ಶಫಿವುಲ್ಲಾ ಅದಕ್ಕೆ ತದ್ವಿರುದ್ಧ. ವಿಶ್ರಾಂತ ಜೀವನದ ಬದಲು ಅವಿಶ್ರಾಂತವಾಗಿ ಒಬ್ಬರೇ ದುಡಿದು ತೋಟವನ್ನು ಕಟ್ಟಿ ಬೆಳೆಸಿದ್ದಾರೆ. 29 ವರ್ಷ ಹಿಂದಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿ, ಈಗ ದಿನವಿಡೀ ತೋಟದಲ್ಲಿ ಕೆಲಸ ಮಾಡುತ್ತಾರೆ. ಸ್ವತಃ ಅವರೇ ಜೀವಾಮೃತ ತಯಾರಿಸಿ, ಗಿಡಗಳಿಗೆ ನೀಡುತ್ತಾರೆ. ಪರಾಗಸ್ಪರ್ಶಕ್ಕಾಗಿ ಜೇನು ಸಾಕಣೆ ಮಾಡುತ್ತಿದ್ದಾರೆ.

ಸಪೋಟ, ಪೇರಲ, ನಿಂಬೆ, ಸೀತಾಫಲ, ಮಾವು, ಪಪ್ಪಾಯ, ತೆಂಗು, ಹಲಸು ಸೇರಿ ಸಾವಿರಕ್ಕೂ ಹೆಚ್ಚು ಸಸಿಗಳನ್ನು ಆಂಧ್ರದ ರಾಜಮಂಡ್ರಿಯಿಂದ ತಂದು ಬೆಳೆಸಿದ್ದಾರೆ. ಕೊಳವೆ ಬಾವಿಯ ನೀರಿನ ಮೂಲಕ ಹನಿ ನೀರಾವರಿಯಿಂದ ಬೆಳೆಗಳಿಗೆ ನೀರು ಕೊಡುತ್ತಿದ್ದಾರೆ. ತೆಂಗು, ನಿಂಬೆ, ಮಾವಿನ ಮರಗಳಲ್ಲಿ ಕಾಯಿ ಹಣ್ಣುಗಳು ತೊನೆದಾಡುತ್ತಿವೆ. ಹಲಸು, ನೇರಳೆ, ನೆಲ್ಲಿಕಾಯಿ ಬಿಡುತ್ತಿದ್ದು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.

ನಿಂಬೆ ಫಸಲನ್ನು ಸ್ಥಳೀಯವಾಗಿ ಸ್ವತಃ ಅವರೇ ಮಾರಾಟ ಮಾಡುತ್ತಾರೆ. ತೋಟದ ಉಳಿದ ಹಣ್ಣುಗಳು ಅವರ ಆದಾಯವನ್ನು ಹೆಚ್ಚಿಸಿವೆ. ಸ್ವತಃ ಜನರೇ ಅವರ ಬಳಿ ಬಂದು ಖರೀದಿಸುತ್ತಾರೆ.

‘ಮೊದಲ ಎರಡು ವರ್ಷಗಳಲ್ಲಿ 150 ಪಪ್ಪಾಯ ಗಿಡಗಳಿಂದ ಉತ್ತಮ ಆದಾಯ ಬಂದಿದೆ. ಕಳೆದ ವರ್ಷದಿಂದ ತೋಟದಲ್ಲಿನ ಕೆಲ ಮರಗಳು ಫಲ ಬಿಡಲಾರಂಬಿಸಿದ್ದು, ನಿರೀಕ್ಷಿತ ಆದಾಯ ಬರಬಹುದು’ ಎಂದು ಶಫಿವುಲ್ಲಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT