ಹೊಸಪೇಟೆ: ‘ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ನಡೆದ ದಾಳಿಯ ಹೊಣೆಯನ್ನು ಕೇಂದ್ರ ಸರ್ಕಾರ ಹೊರಬೇಕು’ ಎಂದು ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.
ಇಲ್ಲಿನ ವಕೀಲರ ಸಂಘದ ಕಚೇರಿಯಲ್ಲಿ ಸೋಮವಾರ ಮತಯಾಚಿಸಿದ ಅವರು, ‘ಬೇಹುಗಾರಿಕೆ ಹಾಗೂ ಭದ್ರತಾ ವೈಫಲ್ಯದಿಂದ 40ಕ್ಕೂ ಹೆಚ್ಚು ಯೋಧರು ಪ್ರಾಣ ಕಳೆದುಕೊಳ್ಳಬೇಕಾಯಿತು’ ಎಂದರು.
‘ಯುವಜನಾಂಗ ಸತ್ಯ ಅರಿಯಬೇಕು. ಜತೆಗೆ ಅದನ್ನು ಬೇರೆಯವರಿಗೂ ತಿಳಿಸುವ ಕೆಲಸ ಮಾಡಬೇಕು. ರಾಜಕಾರಣ ಹಣಕ್ಕಾಗಿ, ಶೋಕಿ ಮಾಡುವುದಕ್ಕಲ್ಲ. ಸತ್ಯವನ್ನು ಹೇಳಿ ಜನರನ್ನು ಪ್ರಜ್ಞಾವಂತರಾಗಿ ಮಾಡುವುದು. ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು’ ಎಂದು ಹೇಳಿದರು.
‘ಫುಡ್ ಪಾರ್ಕ್ ಸ್ಥಾಪನೆ ಸಂಬಂಧ ಜಿಲ್ಲಾ ಆಡಳಿತದೊಂದಿಗೆ ಚರ್ಚಿಸಿದ್ದೇನೆ. ಬಡತನ, ನಿರುದ್ಯೋಗ, ಕೆರೆಗಳಿಗೆ ನೀರು ತುಂಬಿಸಿ, ಕುಡಿಯುವ ನೀರಿನ ಸಮಸ್ಯೆ ನೀಗಿಸಲಾಗುವುದು. ಉಪಚುನಾವಣೆಯಲ್ಲಿ ಬೆಂಬಲಿಸಿರುವಂತೆ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ ಜನರು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ವಕಕೀಲ ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ, ವಕೀಲರಾದ ಗುಜ್ಜಲ್ ನಾಗರಾಜ್, ತಾರೀಹಳ್ಳಿ ಹನುಮಂತಪ್ಪ, ಕೆ.ಪ್ರಹ್ಲಾದ, ಬಿ.ವೀರಭದ್ರಪ್ಪ, ಚನ್ನಪ್ಪ, ಮಲ್ಲಿಕಾರ್ಜುನ, ಆನಂದ್, ಸುರೇಶ್ ಪಿ.ವೆಂಕಟೇಶ ಇದ್ದರು.