ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗೆ ಕರ್ನಾಟಕ ಮಾಹಿತಿ ಆಯೋಗ ₹25 ಸಾವಿರ ದಂಡ ವಿಧಿಸಿದೆ.
ಚಿಕ್ಕಬಾಣಾವರದ ನಿವಾಸಿ ಚಿಕ್ಕೇಗೌಡ ಅವರು 2018ರಲ್ಲಿ ಬಿಇಎಂಎಲ್ 4ನೇ ಹಂತದ ಕಟ್ಟಡಕ್ಕೆ ನೀಡಲಾಗಿರುವ ನಕ್ಷೆ ಮತ್ತು ಅನುಮತಿಯ ಮಾಹಿತಿಯನ್ನು ಕೇಳಿದ್ದರು. ಬಿಬಿಎಂಪಿಯ ರಾಜರಾಜೇಶ್ವರಿನಗರ ಉಪ ವಿಭಾಗದ ಅಧಿಕಾರಿಗಳು ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಅರ್ಜಿದಾರರು ಮಾಹಿತಿ ಆಯೋಗದ ಮೊರೆ ಹೋಗಿದ್ದರು.
ಆರು ವರ್ಷಗಳ ನಂತರವೂ ಅಧಿಕಾರಿಗಳು ಮಾಹಿತಿಯನ್ನು ನೀಡಲು ನಿರಾಕರಿಸಿದ್ದರು. 30 ದಿನದೊಳಗೆ ಮಾಹಿತಿ ಒದಗಿಸಿ, ವೈಯಕ್ತಿಕವಾಗಿ ಹಾಜರಾಗಲು ಎಇಇಗೆ ಆಯೋಗ ಆದೇಶಿಸಿತ್ತು. ಇದನ್ನೂ ಪಾಲಿಸದ ಎಇಇ ಬಸವರಾಜು ಅವರಿಗೆ ದಂಡ ವಿಧಿಸಿ, ವಿವರಣೆ ನೀಡಲು ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಬಸವರಾಜು ಅವರ ವೇತನದಲ್ಲಿ ₹25 ಸಾವಿರ ದಂಡ ಕಡಿತ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತರಿಗೆ ಮಾಹಿತಿ ಆಯೋಗದ ಆಯುಕ್ತ ಎಸ್.ಬಿ. ಬೊಮ್ಮನಹಳ್ಳಿ ಆದೇಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.