ಬೆಂಗಳೂರು: ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಪೈಕಿ ಶೇ 50ರಷ್ಟನ್ನು ಭಾನುವಾರದಿಂದಲೇ (ಜುಲೈ 19) ನೀಡಬೇಕೆಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತಾಕೀತಿಗೆ ಖಾಸಗಿ ವೈದ್ಯಕೀಯ ಕಾಲೇಜುಗಳು ಮಣಿದಿವೆ.
ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆ ಶನಿವಾರ ಸಭೆ ನಡೆಸಿದ ಮುಖ್ಯಮಂತ್ರಿ, ಹಾಸಿಗೆ ನೀಡುವ ವಿಷಯದಲ್ಲಿ ಸಬೂಬು, ನೆಪ, ಕಳ್ಳಾಟ ಆಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಅಲ್ಲದೆ, ಎಲ್ಲ ಖಾಸಗಿ ವೈದ್ಯಕೀಯ ಕಾಲೇಜುಗಳ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
‘ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯರು, ನರ್ಸ್ಗಳ ಕೊರತೆ ಇದ್ದರೆ ಸರ್ಕಾರವೇ ನೇಮಿಸಲು ಸಿದ್ಧ. ಅಲ್ಲದೆ, ಎಲ್ಲ ರೀತಿಯ ನೆರವು ನೀಡಲು ಬದ್ಧ’ ಎಂದು ಭರವಸೆ ನೀಡಿದ ಯಡಿಯೂರಪ್ಪ, ಸಭೆಗೆ ಗೈರಾದ ವೈದೇಹಿ ವೈದ್ಯಕೀಯ ಕಾಲೇಕಿನ ಆಡಳಿತ ಮಂಡಳಿಗೆ ನೋಟಿಸ್ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.
ಮುಖ್ಯಮಂತ್ರಿಯ ಮನವಿಗೆ ಸ್ಪಂದಿಸಿರುವ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು, ‘ಕೆಲವು ಕಾಲೇಜುಗಳು ಶೇ 50ರಷ್ಟು ಹಾಗೂ ಇನ್ನೂ ಕೆಲವು ಕಾಲೇಜುಗಳು ಶೇ 80ರಷ್ಟು ಹಾಸಿಗೆ ನೀಡುತ್ತೇವೆ. ಅಷ್ಟೇ ಅಲ್ಲ, ಲಭ್ಯವಿರುವ ವೆಂಟಿಲೇಟರ್ಗಳನ್ನೂ ಒದಗಿಸುತ್ತೇವೆ’ ಎಂದು ಭರವಸೆ ನೀಡಿದರು.
‘ಕೆಲವೆಡೆಗಳಲ್ಲಿ ಕೋವಿಡ್ ಹಾಗೂ ಕೋವಿಡ್ ಅಲ್ಲದ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವುದು ಗಮನಕ್ಕೆ ಬಂದಿದೆ. ಕೆಲವು ವೈದ್ಯಕೀಯ ಕಾಲೇಜುಗಳಿಗೆ ಸಚಿವರು ಭೇಟಿ ನೀಡಿದಾಗ, ಈ ಹಿಂದೆ ನೀಡಿದ ಭರವಸೆಯಂತೆ ಹಾಸಿಗೆಗಳನ್ನು ಒದಗಿಸದಿರುವುದು ಗೊತ್ತಾಗಿದೆ’ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.
ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ‘10 ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು ಸಭೆಗೆ ಬಂದಿದ್ದರು. ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಯನ್ನೇ ಬಿಟ್ಟು ಕೊಡಲು ಆಕಾಶ್ ಮತ್ತು ಅಂಬೇಡ್ಕರ್ ವೈದ್ಯಕೀಯ ಕಾಲೇಜುಗಳು ಮುಂದಾಗಿವೆ. ಉಳಿದ, ವೈದ್ಯಕೀಯ ಕಾಲೇಜುಗಳು ಹತ್ತು ದಿನಗಳೊಳಗೆ ಶೇ 50ರಷ್ಟು ಹಾಸಿಗೆಗಳನ್ನು ಬಿಟ್ಟು ಕೊಡಲು ಒಪ್ಪಿವೆ’ ಎಂದರು.
**
ಇನ್ನು ಮುಂದೆ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆ ಸಭೆ ನಡೆಸುವುದಿಲ್ಲ. ಹಾಸಿಗೆ ಬಿಟ್ಟು ಕೊಡದ ಕಾಲೇಜುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳುತ್ತೇವೆ. -ಆರ್.ಅಶೋಕ, ಕಂದಾಯ ಸಚಿವ