ಯಲಹಂಕ: ’ಶಿಕ್ಷಕ ವೃತ್ತಿ ಬಹಳ ಶ್ರೇಷ್ಠ. ಜಾತಿ, ಭಾಷೆ ಹಾಗೂ ಧರ್ಮದ ತಾರತಮ್ಯಗಳನ್ನು ಮೀರಿ ಮಕ್ಕಳಿಗೆ ಸಂಸ್ಕಾರಯುತ ಮತ್ತು ಜ್ಞಾನಾಧಾರಿತ ಶಿಕ್ಷಣವನ್ನು ಧಾರೆಯೆರೆಯುವವರೇ ನಿಜವಾದ ಶಿಕ್ಷಕರು’ ಎಂದು ತುಮಕೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ರೇವಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ರೇವಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ಗುರುನಮನ’ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ವಪಲ್ಲಿ ರಾಧಾಕೃಷ್ಣ ಮತ್ತು ಸಾವಿತ್ರಿಬಾಯಿ ಪುಲೆ ಅವರು ಶಿಕ್ಷಕರಿಗೆ ಎಂದೆಂದಿದೂ ಮಾದರಿಯಾಗಿದ್ದಾರೆ’ ಎಂದು ಸ್ಮರಿಸಿದರು.
ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಧನಂಜಯ ಮಾತನಾಡಿ, ‘ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಅತಿಮುಖ್ಯ. ಪ್ರಾಥಮಿಕ ಶಿಕ್ಷಕರು ಒಬ್ಬ ತಂದೆ, ತಾಯಿ ಸ್ಥಾನದಲ್ಲಿ ನಿಂತು ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಹೊಂದಿದ್ದಾರೆ’ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಲಯ-4ರ ವ್ಯಾಪ್ತಿಯ ಶಾಲಾ-ಕಾಲೇಜುಗಳ 85 ಶಿಕ್ಷಕರಿಗೆ "ಉತ್ತಮಶಿಕ್ಷಕ" ಪ್ರಶಸ್ತಿ ಪ್ರದಾನಮಾಡಲಾಯಿತು.