ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ, ಕೊಮ್ಮಘಟ್ಟ, ಪುಲಕೇಶಿನಗರದಲ್ಲಿ ಅಪಘಾತ: ನಾಲ್ವರ ಸಾವು

Published 11 ಜನವರಿ 2024, 21:04 IST
Last Updated 11 ಜನವರಿ 2024, 21:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ನಾಲ್ಕು ಸ್ಥಳಗಳಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಬೈಕ್‌ ಸವಾರರು ಹಾಗೂ ಒಬ್ಬ ಪಾದಚಾರಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಯಲಹಂಕದ ಬಿಬಿ ಮುಖ್ಯರಸ್ತೆಯ ವಿದ್ಯಾಶಿಲ್ಪ ಆಪ್‌ರ್‍ಯಾಂಪ್‌ ಬಳಿ ನಡೆದ ಅಪಘಾತದಲ್ಲಿ ಪಾದಚಾರಿ, ಜಕ್ಕೂರು ಲೇಔಟ್‌ ನಿವಾಸಿ ಎಚ್‌.ಆರ್‌.ಸಿದ್ದಲಿಂಗೇಗೌಡ (60) ಅವರು ಮೃತಪಟ್ಟಿದ್ದಾರೆ. ಸಿದ್ದಲಿಂಗೇಗೌಡ ಅವರು ಮಣ್ಣಿನಿಂದ ಕಲಾಕೃತಿ ರಚಿಸಿ ಮಾರಾಟ ಮಾಡುತ್ತಿದ್ದರು.

‘ದೇವನಹಳ್ಳಿ ಕಡೆಯಿಂದ ಹೆಬ್ಬಾಳದ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಬೂಲೆರೊ ಪಿಕ್‌ಅಪ್‌ ವಾಹನವು ಜಂಕ್ಷನ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಿದ್ದಲಿಂಗೇಗೌಡ ಅವರಿಗೆ ಡಿಕ್ಕಿಯಾಗಿತ್ತು. ಇದರಿಂದ ತಲೆಗೆ ಪೆಟ್ಟು ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಯಲಹಂಕದ ಸಾರ್ವಜನಿಕ ಆಸ್ಪತ್ರೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟರು’ ಎಂದು ಸಂಚಾರ ಪೊಲೀಸರು ತಿಳಿಸಿದರು.

ಬೈಕ್ ಸವಾರ ಸಾವು:

ಕೊಮ್ಮಘಟ್ಟದ ಬಳಿ ಬೈಕ್‌ವೊಂದು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಪರಿಣಾಮ ಬೈಕ್‌ ಸವಾರ ಮೃತಪಟ್ಟಿದ್ದಾರೆ. ರಾಮಮೂರ್ತಿ(32) ಮೃತಪಟ್ಟವರು.

‘ರಾಮಮೂರ್ತಿ ಅವರು ಕೊಮ್ಮಘಟ್ಟ ರಸ್ತೆಯಲ್ಲಿ ವೇಗವಾಗಿ ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ಬೈಕ್‌ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಅವರು ಮೃತಪಟ್ಟಿದ್ಧಾರೆ’ ಎಂದು ಪೊಲೀಸರು ತಿಳಿಸಿದರು.

‘ಸವಾರ ಮದ್ಯ ಸೇವಿಸಿ ವೇಗವಾಗಿ ಬೈಕ್‌ ಚಲಾಯಿಸುತ್ತಿದ್ದರು. ಇದೇ ಅಪಘಾತಕ್ಕೆ ಕಾರಣವಾಗಿದೆ’ ಎಂದು ಪೊಲೀಸರು ಹೇಳಿದರು.

ಕ್ಯಾಂಟರ್– ಬೈಕ್‌ ನಡುವೆ ಅಪಘಾತ:

ಯಲಹಂಕದ ಮೈಲನಹಳ್ಳಿ ಮುಖ್ಯರಸ್ತೆಯಲ್ಲಿ ಬೈಕ್ ಹಾಗೂ ಕ್ಯಾಂಟರ್‌ ವಾಹನದ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದಾರೆ.

ಜಾಲಾ ಹೋಬಳಿಯ ಹೂಣಚೂರು ಗ್ರಾಮದ ವೆಂಕಟೇಶಪ್ಪ (60) ಅವರು ಮೃತಪಟ್ಟವರು. ಮೈಲನಹಳ್ಳಿ ಮುಖ್ಯರಸ್ತೆಯಲ್ಲಿ ಎಲ್‌ಡಬ್ಲ್ಯು ಲೇಬರ್‌ ಕಾಲೊನಿಯಲ್ಲಿ ಅಪಘಾತ ನಡೆದಿದೆ.

ಬುಧವಾರ ಬೆಳಿಗ್ಗೆ 10 ಗಂಟೆ ಸಮಯದಲ್ಲಿ ವೆಂಕಟೇಶಪ್ಪ ಅವರು ತಮ್ಮ ಟಿವಿಎಸ್‌ ಎಕ್ಸ್‌ಎಲ್‌ ಸ್ಕೂಟರ್‌ನಲ್ಲಿ ಲೇಬರ್ ಕಾಲೊನಿ ಕಡೆಯಿಂದ ಕಾಡಯರಪ್ಪನಹಳ್ಳಿ ಕಡೆಗೆ ತೆರಳುತ್ತಿದ್ದರು. ಎದುರಿನಿಂದ ವೇಗವಾಗಿ ಬಂದ ಕ್ಯಾಂಟರ್, ಸ್ಕೂಟರ್‌ಗೆ ಡಿಕ್ಕಿ ಹೊಡಿದಿತ್ತು. ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ಧಾರೆ.

ಚಾಲಕ, ಕ್ಯಾಂಟರ್‌ ಅನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ಧಾನೆ. ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಕಾರು–ಬೈಕ್‌ ನಡುವೆ ಅಪಘಾತ:

ಪುಲಕೇಶಿ ನಗರ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಲ್ಸ್ ರಸ್ತೆಯ ಹೇನ್ಸ್ ರಸ್ತೆ ಜಂಕ್ಷನ್‌ನಲ್ಲಿ ಕ್ಯಾಬ್‌ ಹಾಗೂ ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದಾರೆ.

ಹೆಣ್ಣೂರು ನಿವಾಸಿ ಆರ್‌.ಗೋಪಿ (25) ಮೃತಪಟ್ಟವರು. ಗೋಪಿ ಅವರು ‘ದಿ ಹಿಂದೂ’ ಪತ್ರಿಕೆಯ ಪ್ರಸರಣ ವಿಭಾಗದಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರು.

ಗುರುವಾರ ಬೆಳಿಗ್ಗೆ 5.45ರ ಸಮಯದಲ್ಲಿ ಪಾಟರಿ ಸರ್ಕಲ್ ಕಡೆಯಿಂದ ಹೇನ್ಸ್ ವೃತ್ತದ ಕಡೆಗೆ ತೆರಳುತ್ತಿದ್ದರು. ಬೈಕ್‌ ಸವಾರ ಹೆಲ್ಮೆಟ್‌ ಧರಿಸಿ, ಬೈಕ್ ಓಡಿಸುತ್ತಿದ್ದರು. ಕೋಲ್ಸ್ ರಸ್ತೆಯ ಎಚ್‌.ಪಿ ಪೆಟ್ರೋಲ್ ಬಂಕ್ ಕಡೆಯಿಂದ ನೇತಾಜಿ ಕಡೆಗೆ ತೆರಳುತ್ತಿದ್ದ ಕ್ಯಾಬ್ ಹಾಗೂ ಬೈಕ್‌ ನಡುವೆ ಅಪಘಾತವಾಗಿತ್ತು. ಇದರಿಂದ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಸಾರ್ವಜನಿಕರೇ ಅವರನ್ನು ಆಂಬುಲೆನ್ಸ್‌ ಮೂಲಕ ಬೌರಿಂಗ್‌ ಆಸ್ಪತ್ರೆಗೆ ಕರೆಯೊಯ್ದಿದ್ದರು. ಅಲ್ಲಿ ಮೃತಪಟ್ಟಿದ್ದಾರೆ.

ಮೃತರ ತಾಯಿ ಸವಿತಾ ದೂರು ನೀಡಿದ್ದು ಕ್ಯಾಬ್‌ ಚಾಲಕ ಮೌನೇಶ ವಿರುದ್ಧ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT