ಬೆಂಗಳೂರು:ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಿಚ್ಪಾಲ್ ಎಂಬುವರು ನಾಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ನಿಲ್ದಾಣದ ಸಿ.ಸಿ.ಟಿ.ವಿ ಕ್ಯಾಮೆರಾಗಳ ಸಿಡಿಆರ್ಗಳನ್ನು ಪರಿಶೀಲಿಸುತ್ತಿದ್ದಾರೆ.
ರಾಜಸ್ಥಾನದ ರಿಚ್ಪಾಲ್, ಚಿತ್ತೂರಿನ ಟೈಲ್ಸ್ ಕಾರ್ಖಾನೆ ಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯ ಮಹಡಿಯಿಂದ ಬಿದ್ದು ಕಾಲಿಗೆ ಪೆಟ್ಟಾಗಿತ್ತು. ವಿಶ್ರಾಂತಿ ಪಡೆಯುವುದಕ್ಕಾಗಿ ತಮ್ಮೂರಿಗೆ ತೆರಳಲು ಜುಲೈ 12ಕ್ಕೆ ನಿಲ್ದಾಣಕ್ಕೆ ಬಂದಾಗ ನಾಪತ್ತೆ ಆಗಿದ್ದಾರೆ. ಆ ಬಗ್ಗೆ ಸಂಬಂಧಿ ಮುಖೇಶ್, ಪೊಲೀಸರಿಗೆ ದೂರು ನೀಡಿದ್ದಾರೆ.
‘ವ್ಹೀಲ್ಚೇರ್ನಲ್ಲಿ ಕುಳಿತಿದ್ದ ರಿಚ್ಪಾಲ್ ಅವರನ್ನು ನಿಲ್ದಾಣದ ಸಿಬ್ಬಂದಿ ಒಳಗೆ ಕರೆದೊಯ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಒಳಗಿನ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಕೆಲವು ದೃಶ್ಯಗಳು ಅಸ್ಪಷ್ಟವಾಗಿವೆ’ ಎಂದು ಪೊಲೀಸರು ಹೇಳಿದರು.
‘ನಿಲ್ದಾಣದ ಭದ್ರತಾ ಸಿಬ್ಬಂದಿಯಿಂದ ಹೇಳಿಕೆ ಪಡೆಯಲಾಗುತ್ತಿದೆ. ಟಿಕೆಟ್ ಕಾಯ್ದಿರಿಸಿದ್ದ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸದ್ಯಕ್ಕೆರಿಚ್ಪಾಲ್ ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ’ ಎಂದು ತಿಳಿಸಿದರು.
ಕಾರು ಬಾಡಿಗೆಗೆ ಪಡೆದು ದರೋಡೆ
ಬೆಂಗಳೂರು: ಜೂಮ್ ಕಾರುಗಳನ್ನು ಬಾಡಿಗೆಗೆ ಪಡೆದು, ಅದರಲ್ಲೇ ಸುತ್ತಾಡಿ ದರೋಡೆ ಮಾಡುತ್ತಿದ್ದ ಆರೋಪದಡಿ ಏಳು ಮಂದಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಮಧುಸೂದನ್ಗೌಡ, ಹರೀಶ್, ಅಭಿಷೇಕ್, ಪ್ರಕಾಶ್, ಪ್ರವೀಣ್ , ರಾಹುಲ್ ಹಾಗೂ ಕಿಶೋರ್ ಬಂಧಿತರು. ಅವರಿಂದ ₹26.84 ಲಕ್ಷ ಮೌಲ್ಯದ ಎರಡು ಕಾರುಗಳು, 7 ಮೊಬೈಲ್ಗಳು ಹಾಗೂ ಚಿನ್ನದ ಸರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ನಂದಿನಿ ಲೇಔಟ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜೂಮ್ ಕಾರಿನಲ್ಲಿ ಸಂಚರಿಸುತ್ತಿದ್ದ ಆರೋಪಿಗಳು, ಒಂಟಿಯಾಗಿ ಹೋಗುವವರನ್ನು ತಡೆದು ದರೋಡೆ ಮಾಡುತ್ತಿದ್ದರು. ಇವರ ಬಂಧನದಿಂದ ಹಲವು ಪ್ರಕರಣಗಳು ಪತ್ತೆ ಆಗಿವೆ ಎಂದು ಪೊಲೀಸರು ಹೇಳಿದರು.
ಸಾರ್ವಜನಿಕರಿಂದ ಮೊಬೈಲ್, ಚಿನ್ನದ ಸರ ಹಾಗೂ ಬೆಲೆಬಾಳುವ ವಸ್ತುಗಳನ್ನು ಆರೋಪಿಗಳು ದೋಚುತ್ತಿದ್ದರು. ಆ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು. ಅದನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು.ರಾಜಾಜಿನಗರದಲ್ಲಿ ಇತ್ತೀಚೆಗೆ ಸಂಜಯ್ ಎಂಬುವರನ್ನು ದರೋಡೆ ಮಾಡಿದ್ದರು. ಅವರು ನೀಡಿದ್ದ ದೂರಿನನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.