ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ದಿನ: ಪರೇಡ್‌, ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಆಯೋಜನೆ * 15ರಂದು ವಿವಿಧ ರೆಜಿಮೆಂಟ್‌ಗಳಿಂದ ಪಥಸಂಚಲನ
Last Updated 10 ಜನವರಿ 2023, 20:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಜ.15ರಂದು ನಡೆಯುವ ಸೇನಾ ದಿನದ ಪರೇಡ್‌ಗೆ ಎಂಇಜಿ ಕೇಂದ್ರದಲ್ಲಿ ಸಿದ್ಧತೆಗಳು ಭರದಿಂದ ನಡೆದಿವೆ. ಇದೇ ಪ್ರಥಮ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹೊರಗೆ

ದೇಶದ ಎಲ್ಲ ಪ್ರಮುಖ ಸ್ಥಳಗಳಲ್ಲಿ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ಸೂಚಿಸಿತ್ತು. ಹೀಗಾಗಿ, ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ.

ಭಾರತದಲ್ಲಿ ಕೊನೆಯದಾಗಿ ಕಾರ್ಯನಿರ್ವಹಿಸಿದ್ದ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜನರಲ್ ಫ್ರಾನ್ಸಿಸ್ ರಾಯ್‌ ಬಚರ್ ಅವರಿಂದ ಭಾರತೀಯ ಸೇನೆಯ ‘ಕಮಾಂಡರ್ ಇನ್ ಚೀಫ್’ ಆಗಿ 1949ರ ಜನವರಿ 15ರಂದು ಲೆಫ್ಟಿನೆಂಟ್ ಜನರಲ್ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಧಿಕಾರ ಸ್ವೀಕರಿಸಿದ್ದರು. ಬ್ರಿಟಿಷರು ಅಧಿಕಾರ ಹಸ್ತಾಂತರಿಸಿದ ಈ ಐತಿಹಾಸಿಕ ದಿನವನ್ನು ಸೇನಾ ದಿನ ಎಂದು ಆಚರಿಸಲಾಗುತ್ತಿದೆ.

ಸೇನಾ ದಿನದ ಪರೇಡ್‌ಗಾಗಿ ಎಂಇಜಿ ಸೆಂಟರ್‌ನ ‘ಗೋವಿಂದಸ್ವಾಮಿ ಸ್ಕ್ವೇರ್‌ ಡ್ರಿಲ್‌’ನಲ್ಲಿ ಹಲವು ದಿನಗಳಿಂದ ವಿವಿಧ ರೆಜಿಮೆಂಟ್‌ಗಳ ಯೋಧರು ತಾಲೀಮು ಕೈಗೊಂಡಿದ್ದಾರೆ.

ಸೇನಾ ದಿನದಂದು ಸುಮಾರು 500 ಯೋಧರಿಂದ ಆಕರ್ಷಕ ಪಥ ಸಂಚಲನ ನಡೆಯಲಿದೆ. ಜತೆಗೆ ‘ಟಿ–90’ ಟ್ಯಾಂಕ್‌ಗಳು, 155ಎಂ.ಎಂ. ಬೊಫೋರ್ಸ್‌ ಗನ್‌ ಸೇರಿದಂತೆ ಸೇನೆಯ ಸಾಮರ್ಥ್ಯ ಬಿಂಬಿಸುವ ವಿವಿಧ ಯುದ್ಧ ಟ್ಯಾಂಕ್‌ಗಳು, ರೇಡಾರ್‌ಗಳ ಪ್ರದರ್ಶನವೂ ನಡೆಯಲಿದೆ.

‘ದೆಹಲಿಯಿಂದ ಹೊರಗೆ ಆಯೋಜಿಸುತ್ತಿರುವ ಈ ರಾಷ್ಟ್ರೀಯ ಕಾರ್ಯಕ್ರಮದ ಆತಿಥ್ಯ ವಹಿಸಲಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಸೇನೆಯ ಬಗ್ಗೆ ಕರ್ನಾಟಕದ ಜನರು ಅಪಾರ ಗೌರವ ಹೊಂದಿದ್ದಾರೆ ಮತ್ತು ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ. ಪಥಸಂಚಲನದ ಸಂದರ್ಭದಲ್ಲಿ ಧ್ರುವ ಮತ್ತು ರುದ್ರ ಹೆಲಿಕಾಪ್ಟರ್‌ಗಳ ಪ್ರದರ್ಶನವು ನಡೆಯಲಿದೆ’ ಎಂದು ಕರ್ನಾಟಕ ಮತ್ತು ಕೇರಳ ಉಪ ವಲಯದ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಮೇಜರ್‌ ಜನರಲ್‌ ರವಿ ಮುರುಗನ್‌ ವಿವರಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಮದ್ರಾಸ್‌ ಎಂಜಿನಿಯರಿಂಗ್‌ ಯುದ್ಧ ಸ್ಮಾರಕದಲ್ಲಿ ಸೇನಾ ಪಡೆ ಮುಖ್ಯಸ್ಥ ಮೇಜರ್‌ ಜನರಲ್‌ ಮನೋಜ್‌ ಪಾಂಡೆ ಅವರು ಹುತಾತ್ಮರಾದ ಯೋಧರಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ನಂತರ, ಪಥಸಂಚಲನ ವೀಕ್ಷಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶೌರ್ಯ ಪ್ರಶಸ್ತಿ ಹಾಗೂ ಅಸಾಧಾರಣ ಕಾರ್ಯಕ್ಷಮತೆ ತೋರಿದ ಘಟಕಗಳಿಗೆ ಪ್ರಶಂಸಾ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ಕಳೆದ ವಾರ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ರಕ್ಷಣಾ ಪಡೆಗಳ ಯೋಧರ ಕುಟುಂಬದ ಸದಸ್ಯರು ಸೇರಿದಂತೆ ಸಾರ್ವಜನಿಕರಿಗೆ ಪಥಸಂಚಲನದ ತಾಲೀಮು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಸುಮಾರು 11 ಸಾವಿರ ಮಂದಿ ಈ ಪಥಸಂಚಲನ ವೀಕ್ಷಿಸಿದ್ದಾರೆ. ಜ.15ರ ಸಂಜೆ ನಡೆಯುವ ‘ಮಿಲಿಟರಿ ಟ್ಯಾಟೂ’ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

*
ಬೆಂಗಳೂರಿನಲ್ಲಿ ಈ ಬಾರಿ ಸೇನಾ ದಿನ ನಡೆಯುತ್ತಿರುವುದು ಹೆಮ್ಮೆಯ ವಿಷಯ. ದೆಹಲಿಯ ಭಾಗವಹಿಸಿದ್ದೆ. ಈಗ ಮತ್ತೊಮ್ಮೆ ಭಾಗವಹಿಸುವ ಅವಕಾಶ ದೊರೆತಿದೆ
-ಶಿವನಗೌಡ, ಎಂಇಜಿ ಸೆಂಟರ್‌ ಯೋಧ

**

ಭಾಗವಹಿಸುವ ರೆಜಿಮೆಂಟ್‌ಗಳು

*ಆರ್ಮಿ ಸರ್ವಿಸ್‌ ಕಾರ್ಪ್ಸ್‌

*ರೆಜಿಮೆಂಟ್‌ ಆಫ್‌ ಆರ್ಟಿಲರಿ

*ಬಾಂಬೆ ಎಂಜಿನಿಯರ್ಸ್‌ ಗ್ರೂಪ್‌ ಆ್ಯಂಡ್‌ ಸೆಂಟರ್‌

*ಮಹಾರ್ ರೆಜಿಮೆಂಟ್‌ ಸೆಂಟರ್‌

*ಮದ್ರಾಸ್‌ ರೆಜಿಮೆಂಟ್‌ ಸೆಂಟರ್‌

*ಆರ್ಮಿ ಆರ್ಡಿನನ್ಸ್‌ ಕೋರ್‌ ಮಿಲಿಟರಿ ಬ್ಯಾಂಡ್‌

*2 ಸಿಗ್ನಲ್‌ ಟ್ರೈನಿಂಗ್‌ ಸೆಂಟರ್‌, ಗೋವಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT