ಬೆಂಗಳೂರು: ತಮಗೆ ಹಣ ನೀಡಲಿಲ್ಲವೆಂಬ ಕಾರಣಕ್ಕೆ ಬಾಡಿಗೆ ತಾಯಿಯೊಬ್ಬರ ಹೊಟ್ಟೆಗೆ ಒದ್ದು ಹಲ್ಲೆ ಮಾಡಿ ಗರ್ಭಪಾತವಾಗಲು ಕಾರಣವಾಗಿರುವ ಆರು ಆರೋಪಿಗಳನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
‘ಪ್ರಮೀಳಾ, ಪ್ರೇಮಾ, ರೀಟಾ, ಪೂಜಾ, ಆಶಾ ಹಾಗೂ ಮಂಜುನಾಥ್ ಬಂಧಿತರು. ಇವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಸದ್ಯ ಆರೋಪಿಗಳೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಮಕ್ಕಳಿಲ್ಲದ ದಂಪತಿ ಜೊತೆ ಬಾಡಿಗೆ ತಾಯಿಯಾಗಲು ಒಪ್ಪಂದ ಮಾಡಿಕೊಂಡಿದ್ದ 27 ವರ್ಷದ ಮಹಿಳೆ, ಬೇಗೂರು ಠಾಣೆ ವ್ಯಾಪ್ತಿಯ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ಉಳಿದುಕೊಂಡಿದ್ದರು. ಹಣ ನೀಡುವಂತೆ ಒತ್ತಾಯಿಸಿ ಮಾ. 11ರಂದು ರಾತ್ರಿ ಕಟ್ಟಡಕ್ಕೆ ನುಗ್ಗಿದ್ದ ಆರೋಪಿಗಳು, ಮಹಿಳೆಯ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ: ಹಲ್ಲೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಆಧರಿಸಿ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
ಸಂತ್ರಸ್ತೆಯನ್ನು ಸೋಮವಾರ ಭೇಟಿಯಾದ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.