ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಜನಪದ ಸಾಹಿತ್ಯ ಸ್ತ್ರೀಕೇಂದ್ರಿತ'

Last Updated 18 ಸೆಪ್ಟೆಂಬರ್ 2020, 20:02 IST
ಅಕ್ಷರ ಗಾತ್ರ

ಬೆಂಗಳೂರು: 'ಜನಪದ ಸಾಹಿತ್ಯದಲ್ಲಿ ಕೌಟುಂಬಿಕ ನೆಲೆಗಟ್ಟಿನಲ್ಲಿರುವ ಸಂಬಂಧಗಳ ಅನಾವರಣ ಮಾಡಲಾಗಿದೆ. ಈ ಸಾಹಿತ್ಯ ಮಹಿಳಾ ಸ್ಥಾನಮಾನಗಳನ್ನು ಕಟ್ಟಿಕೊಡುವ ಮೂಲಕ ಸ್ತ್ರೀ ಕೇಂದ್ರಿತವಾಗಿದೆ' ಎಂದು ಮೈಸೂರು ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥ ನಂಜಯ್ಯ ಹೊಂಗನೂರು ತಿಳಿಸಿದರು.

ಬಂಡಾಯ ಸಾಹಿತ್ಯ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ 'ಜನಪದ ಸಾಹಿತ್ಯ ಮತ್ತು ಸಾಮಾಜಿಕ ಸಂವೇದನೆ' ಕುರಿತು ಆನ್‍ಲೈನ್ ಮೂಲಕ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

'ಕುಟುಂಬಗಳಲ್ಲಿ ಕಾಣಸಿಗುವ ಬಂಧುತ್ವ, ಹಿರಿಮೆ, ಸಾಮರಸ್ಯ ಹಾಗೂ ಹೆಣ್ಣಿನ ಸ್ಥಾನಮಾನಗಳು ಜನಪದ ಕಥೆಗಳಲ್ಲಿ ಸೊಗಸಾಗಿ ಮೂಡಿಬರುತ್ತವೆ. ಆದರೆ, ಇಂದಿನ ಆಧುನಿಕ ಕೌಟುಂಬಿಕ ವ್ಯವಸ್ಥೆಯಲ್ಲಿ ಅಜ್ಜ-ಅಜ್ಜಿಯರಿಂದ ಆಲಿಸಿಕೊಳ್ಳಬೇಕಾದ ಜನಪದ ಕಥೆಗಳು ಮರೆಯಾಗುತ್ತಿವೆ' ಎಂದರು.

'ಜನಪದ ಸಾಹಿತ್ಯ ಹಾಗೂ ಶ್ರಮ ಸಂವೇದನೆ' ಕುರಿತು ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥ ಚೆಲುವರಾಜು,'ಶ್ರಮ ಸಂವೇದನೆಯಲ್ಲಿ ಮಾನವನ ತೊಡಗುವಿಕೆ ಇಳಿಮುಖವಾಗುತ್ತಿದೆ. ದುಡಿಯುವ ವರ್ಗಕ್ಕೂ ಜನಪದ ಸಾಹಿತ್ಯಕ್ಕೂ ಅಂತರವಿದೆ. ಅಲೆಮಾರಿ ಹಾಗೂ ತಳವರ್ಗದ ಸಮುದಾಯಗಳಿಂದ ಜನಪದ ಸಾಹಿತ್ಯದ ಶ್ರಮ ಸಂವೇದನೆ ಕಾಣಬಹುದು. ದುಡಿಯುವ ವರ್ಗ ಬೇರೆಡೆಗೆ ಕೇಂದ್ರಿತವಾದರೆ, ಬೆವರು ಹರಿಸುವವರಲ್ಲಿ ಜನಪದ ಕೇಂದ್ರಿತವಾಗಿರುತ್ತದೆ' ಎಂದರು.

ಚಿಕ್ಕಮಗಳೂರಿನ ಸರ್ಕಾರಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಆರ್.ಎ.ಪುಷ್ಪಭಾರತಿ, 'ಜನಪದ ಸಾಹಿತ್ಯದಲ್ಲಿ ಜನರ ಹಸಿವು, ನೋವು, ಸಂಕಟಗಳು ಹಾಗೂ ಅಸಹಾಯಕತೆಯನ್ನು ವಿಡಂಬನೆ ರೂಪದಲ್ಲಿ ಹೊರಹಾಕಿರುವುದನ್ನು ಕಾಣಬಹುದು. ಅದರ ತೀವ್ರತೆಯನ್ನು ಪದಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಈ ರೀತಿಯ ನೋವಿನ ಸ್ಫೋಟಗಳು ಜನಪದ ಸಾಹಿತ್ಯದಲ್ಲಿ ಅಡಕವಾಗಿವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT