ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಕಾಯ್ದೆ: ಬಿಜೆಪಿಯೊಳಗೇ ಅಸಮಾಧಾನ

ಕಾಯ್ದೆ ವಿರುದ್ಧ ಆಕ್ರೋಶಗಳ ಸುರಿಮಳೆ * ಲೋಪ ಸರಿಪಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ರಮೇಶ್‌ ಮನವಿ
Last Updated 24 ಜನವರಿ 2021, 5:17 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಬಿಬಿಎಂಪಿ ಕಾಯ್ದೆಯ ಕೆಲವು ಅಂಶಗಳು ಲೋಪಗಳಿಂದ ಕೂಡಿವೆ ಎಂದು ಸ್ವತಃ ಬಿಜೆಪಿ ಮುಖಂಡರೇ ಧ್ವನಿ ಎತ್ತಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದಾಗಲೇ ಅದರಲ್ಲಿರುವ ಕೆಲವು ಅಂಶಗಳು ಸಂವಿಧಾನದ 174ನೇ ತಿದ್ದುಪಡಿಯ ಅಶಯಗಳಿಗೆ ವಿರುದ್ಧವಾಗಿವೆ ಎಂದು ಕೆಲವು ಬಿಜೆಪಿ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದರು. ಆದರೆ, ಯಾರೂ ಬಹಿರಂಗವಾಗಿ ಇದನ್ನು ಟೀಕಿಸಿರಲಿಲ್ಲ. ಕೊನೆಗೂ ಬಿಜೆಪಿ ನಾಯಕರು ಇದರ ವಿರುದ್ಧ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಕಾಯ್ದೆಯ ಲೋಪಗಳನ್ನು ಪಟ್ಟಿ ಮಾಡಿ ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿಯವರು ನಗರಾಭಿವೃದ್ಧಿ ಇಲಾಖೆಗೆ ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಜನರಿಂದ ಆಯ್ಕೆಯಾದ ಪಾಲಿಕೆ ಸದಸ್ಯರ ಎಲ್ಲ ಅಧಿಕಾರಗಳನ್ನು ಹಾಗೂ ಹಕ್ಕುಗಳನ್ನು ಮೊಟಕುಗೊಳಿಸುವ ದುರುದ್ದೇಶದಿಂದಲೇ ಹೊಸ ಕಾಯ್ದೆಯಲ್ಲಿ 16 ಸೆಕ್ಷನ್‌ಗಳನ್ನು ಸೇರಿಸಿಕೊಳ್ಳಲಾಗಿದೆ. ಒಟ್ಟು 376 ಸೆಕ್ಷನ್‌ಗಳನ್ನು ಹೊಂದಿರುವ ಈ ಕಾಯ್ದೆಯಲ್ಲಿ ಈ 16 ಸೆಕ್ಷನ್‌ಗಳನ್ನು ಹೊರತುಪಡಿಸಿ ಉಳಿದ 360 ಸೆಕ್ಷನ್‌ಗಳನ್ನೂ 45 ವರ್ಷಗಳ ಹಿಂದೆ ರೂಪಿಸಲಾದ 1976ರ ಕರ್ನಾಟಕ ಪೌರನಿಗಮಗಳ ಕಾಯ್ದೆಯಿಂದ ಯಥಾವತ್‌ ನಕಲು ಮಾಡಲಾಗಿದೆ. 2020ರ ಡಿಸೆಂಬರ್‌ ತಿಂಗಳಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಕೊನೆಯ 2–3 ದಿನಗಳಲ್ಲಿ ಈ ಕಾಯ್ದೆಯನ್ನು ಸಿದ್ಧಪಡಿಸಿರುವುದು ಅತ್ಯಂತ ಸ್ಪಷ್ಟ’ ಎಂಬುದು ಬಿಜೆಪಿ ಮುಖಂಡರ ನೇರ ಆರೋಪ.

‘ಈ ಕಾಯ್ದೆ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳನ್ನು ಬುಡಮೇಲು ಮಾಡಲಿದೆ. ಪಾಲಿಕೆಯ ಆರ್ಥಿಕ ವ್ಯವಸ್ಥೆಯನ್ನು ಶಾಸಕರ ಕಪಿಮುಷ್ಠಿಗೆ ಕೊಟ್ಟು ಪಾಲಿಕೆ ಸದಸ್ಯರನ್ನು ಗೊಂಬೆಯಾಟದ ಸೂತ್ರದ ಬೊಂಬೆಗಳಂತೆ ಮಾಡಿ ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವ ಕುತಂತ್ರವಿದು’ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಭಾರತದ ಸಂವಿಧಾನದ ಪ್ರಕಾರ ಗ್ರಾಮಪಂಚಾಯಿತಿಯಿಂದ ಹಿಡಿದು ಯಾವುದೇ ಸ್ಥಳೀಯ ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಶಾಸಕರಾಗಲೀ ಸಂಸದರಾಗಲೀ ಮೂಗು ತೂರಿಸುವಂತಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಜನ ಪ್ರತಿನಿಧಿಗಳ ಸಂವಿಧಾನಬದ್ಧ ಅಧಿಕಾರವನ್ನು ಮೊಟಕುಗೊಳಿಸುವ ಹಕ್ಕು ಶಾಸಕಾಂಗಕ್ಕೆ ಇಲ್ಲ. ಸ್ಥಳೀಯ ಸಂಸ್ಥೆಗಳ ಬಜೆಟ್ ಅನ್ನು ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನಗಳನ್ನು ಮೀಸಲಿಡುವಂತಿಲ್ಲ’ ಎಂದೂ ನೆನಪಿಸಿದ್ದಾರೆ.

ಸೆಕ್ಷನ್‌ 248 ಮಾರ್ಪಾಡಿಗೆ ಒತ್ತಾಯ

ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 248ಕ್ಕೆ ತಿದ್ದುಪಡಿ ತರುವ ಅಗತ್ಯವಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸುವ ಕಟ್ಟಡಕ್ಕೆ ನಕ್ಷೆ ಮಂಜೂರಾತಿಯಿಂದ ಹಿಡಿದು ಆ ಕಟ್ಟಡ ಪೂರ್ಣಗೊಂಡ ಬಳಿಕ ಸ್ವಾಧೀನಾನುಭವ ಪತ್ರ ನೀಡುವವರೆಗಿನ ಎಲ್ಲ ವಿಚಾರಗಳನ್ನೂ ಕಟ್ಟಡ ನಕ್ಷೆಗೆ ಮಂಜೂರಾತಿ ನೀಡುವ ವಿಭಾಗದ ಜವಾಬ್ದಾರಿಗೆ ವಹಿಸಬೇಕು ಎಂಬುದು ಬಿಜೆಪಿ ಮುಖಂಡರ ಒತ್ತಾಯ.

2020ರ ಸೆ 8ರಂದು ನಡೆದ ಬಿಬಿಎಂಪಿ ಕೌನ್ಸಿಲ್‌ನ ಮಾಸಿಕ ಸಭೆಯಲ್ಲಿಯೂ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ನೆನಪಿಸುತ್ತಾರೆ.

ಅನಧಿಕೃತ ನಿರ್ಮಾಣವನ್ನು ಕೆಡಹುವ ಅಥವಾ ತೆರವುಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 248ರ ಪ್ರಕಾರ ಮುಖ್ಯ ಆಯುಕ್ತರಿಗೆ ಮಾತ್ರ ಇದೆ.

ಆಕ್ಷೇಪ ವ್ಯಕ್ತಪಡಿಸಿರುವ 16 ಸೆಕ್ಷನ್‌ಗಳು

75: ವಿಧಾನಸಭಾ ಕ್ಷೇತ್ರವಾರು ಸಲಹಾ ಸಮಿತಿ ಸ್ಥಾಪನೆ

76: ಕ್ಷೇತ್ರ ಸಲಹಾ ಸಮಿತಿಗೆ ಕಾರ್ಯಗಳು

77: ವಲಯ ಸಮಿತಿ ಸ್ಥಾಪನೆ

78:ವಲಯ ಸಮಿತಿಯ ಅಧಿಕಾರಗಳು ಮತ್ತು ಕಾರ್ಯಗಳು

79: ಬಿಬಿಎಂಪಿ ನಿಧಿ ಹಂಚಿಕೆ

83: ವಾರ್ಡ್‌ ಸಮಿತಿ ಸಂಯೋಜನೆ

84: ವಾರ್ಡ್‌ ಸಮಿತಿ ಸದಸ್ಯರಾಗಲು ಇರುವ ಕಾರ್ಯವಿಧಾನ

85: ವಾರ್ಡ್‌ ಸಮಿತಿ ಸಭೆ ನಡೆಸುವಿಕೆ

86: ವಾರ್ಡ್ ಸಮಿತಿಯ ಕಾರ್ಯಗಳು

87: ಬಿಬಿಎಂಪಿ ನಿಧಿ ಹಂಚಿಕೆ

90: ಪ್ರದೇಶ (ಏರಿಯಾ) ಸಭೆಗಳ ರಚನೆ

91: ಪ್ರದೇಶ ಪ್ರತಿನಿಧಿಗಳ ಆಯ್ಕೆ

92: ಪ್ರದೇಶ ಸಭೆಗಳನ್ನು ನಡೆಸುವಿಕೆ

93: ಪ್ರದೇಶ ಸಭೆಗಳ ಕಾರ್ಯಗಳು

193:ವಲಯ ಸಮಿತಿ ಶಿಪಾರಸ್ಸಿನ ಮೇರೆಗೆ ಪಾಲಿಕೆಯ ಬಜೆಟ್‌ ಸಿದ್ಧಪಡಿಸುವಿಕೆ

213: ಹೊಸ ಸಾರ್ವಜನಿಕ ಬೀದಿ ರಚಿಸುವ ಅಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT