ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಂದುವೆಚ್ಚ ಬಿಡಿ; ಆರೋಗ್ಯ ಸೌಕರ್ಯಕ್ಕೆ ಒತ್ತು ಕೊಡಿ: ಪಾಲಿಕೆ ಸದಸ್ಯ ಸಲಹೆ

Last Updated 18 ಜುಲೈ 2020, 18:50 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹಬ್ಬುತ್ತಿರುವ ಈ ಸಂದರ್ಭದಲ್ಲಿ ಬಿಬಿಎಂಪಿ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಆರೋಗ್ಯ ಸೌಕರ್ಯ ಹೆಚ್ಚಿಸಲು ಆದ್ಯತೆ ನೀಡಬೇಕು ಎಂದು ಪಾಲಿಕೆ ಸದಸ್ಯ ಎಂ.ಶಿವರಾಜು ಸಲಹೆ ನೀಡಿದರು.

ಶಂಕರಮಠ ವಾರ್ಡ್‌ನಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮಾತನಾಡಿದರು.

*ವಾರ್ಡ್‌ನಲ್ಲಿ ಕೊರೊನಾ ಸೊಂಕು ನಿಯಂತ್ರಣಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ?
ಎಲ್ಲ ಬಡಾವಣೆಗಳ ಪ್ರಮುಖ ರಸ್ತೆ ಗಳಿಗೆ ಸೊಂಕು ನಿವಾರಕ ಸಿಂಪಡಿಸಿದ್ದೇವೆ. ಕೋವಿಡ್ ಪ್ರಕರಣ ಪತ್ತೆಯಾದವರ ಮನೆಗೆ, ಆ ಕಟ್ಟಡಕ್ಕೆ ಮತ್ತು ಅಕ್ಕ ಪಕ್ಕದ ರಸ್ತೆಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತೇವೆ. ಸೋಡಿಯಂ ಹೈಪೋ ಕ್ಲೋರೈಟ್‌ ದ್ರಾವಣವನ್ನು ಬಿಬಿಎಂಪಿಯೇ ಒದಗಿಸುತ್ತದೆ. ಅದನ್ನು ಸಿಂಪಡಿಸುವ ಜವಾಬ್ದಾರಿಯನ್ನು ನಾವೇ ನಿರ್ವಹಿಸುತ್ತಿದ್ದೇವೆ.

ಬಡಾವಣೆ ನಿವಾಸಿಗಳ ಪ್ರಮುಖರನ್ನು ಒಳಗೊಂಡ ವಾಟ್ಸ್ ಆ್ಯಪ್‌ ಗುಂಪು ರಚಿಸಿಕೊಂಡಿದ್ದೇವೆ. ಅಗತ್ಯ ಇರುವ ಹಿರಿಯ ನಾಗರಿಕರಿಗೆ ಔಷಧ ಪೂರೈಸಲು, ಕೋವಿಡ್‌ ಪ್ರಕರಣ ಪತ್ತೆಯಾದಾಗ ತುರ್ತು ಸ್ಪಂದನೆ ಒದಗಿಸಲು ಇದರಿಂದ ನೆರವಾಗಿದೆ. ಸಮಸ್ಯೆಯಾದರೆ ನೇರವಾಗಿ ಕರೆ ಮಾಡುತ್ತಾರೆ. ಅವರಿಗೆ ನೆರವಾಗಲು ತಂಡವು ಸಜ್ಜಾಗಿದೆ. ತುರ್ತು ಸಂದರ್ಭದಲ್ಲಿ ಸಭೆ ನಡೆಸಿ ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳುತ್ತಿದ್ದೇವೆ.

* ಹಾಸಿಗೆ ಇಲ್ಲ, ಆಂಬುಲೆನ್ಸ್‌ ಸಿಗುತ್ತಿಲ್ಲ ಎಂಬ ದೂರುಗಳು ಬಾರದಂತೆ ಏನು ಕ್ರಮ ವಹಿಸಿದ್ದೀರಿ?
ವಾರ್ಡ್‌ನಲ್ಲಿ ಇದುವರೆಗೆ ಕೋವಿಡ್‌ನ 85 ಪ್ರಕರಣಗಳು ಪತ್ತೆಯಾಗಿವೆ. ಐವರು ಈ ಸೋಂಕಿನಿಂದ ಸತ್ತಿದ್ದಾರೆ. 22 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಯಾವುದೇ ಹೊಸ ಪ್ರಕರಣ ಪತ್ತೆಯಾದರೂ ಅವರನ್ನು ರಾಜಾಜಿನಗರದ ಇಎಸ್‌ಐ ಆಸ್ಪತ್ರೆ, ವಿಕ್ಟೋರಿಯಾ, ಜಿಕೆವಿಕೆ, ಆಕಾಶ್‌ ವೈದ್ಯಕೀಯ ಕಾಲೇಜು, ಮೆಜೆಸ್ಟಿಕ್‌ನ ಆಯುರ್ವೇದ ವೈದ್ಯಕೀಯ ಕಾಲೇಜು ಮುಂತಾದ ಕಡೆಗೆ ದಾಖಲಿಸಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಬೆಂಗಳೂರಲ್ಲಿ ಲಾಕ್‌ಡೌನ್ ಆದಾಗಿನಿಂದಲೂ ಜನರನ್ನು ನೇರ ಭೇಟಿ ಮಾಡಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ಹಿರಿಯ ನಾಗರಿಕರಿಗೆ ಜನರೂ ಸಹಕಾರ ಕೊಡುತ್ತಿದ್ದಾರೆ.

* ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಕ್ರಿಯೆಗೆ ಸಮಸ್ಯೆ ಆಗುತ್ತಿದೆ ಎಂಬ ದೂರುಗಳಿವೆಯಲ್ಲಾ?
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದ ನೆರವಿಗೆ ಯಾರೂ ಮುಂದೆ ಬರುತ್ತಿಲ್ಲ. ಇದು ತಪ್ಪು. ನಾವು ಯಾವತ್ತೂ ಮಾನವೀಯತೆ ಮರೆಯಬಾರದು. ಕೋವಿಡ್‌ ಭಯ ನಿವಾರಿಸಿ ಜನರಲ್ಲಿ ಸ್ಥೈರ್ಯ ತುಂಬಲು ನಾನೇ ಖುದ್ದಾಗಿ ಇಂತಹವರ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುತ್ತಿದ್ದೇನೆ.

ಜಯದೇವದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಒಬ್ಬ ವ್ಯಕ್ತಿ ಕೋವಿಡ್‌ನಿಂದಾಗಿ ತೀರಿ ಹೋದಾಗ ಅವರ 16ವರ್ಷದ ಮಗಳೇ ಅಂತ್ಯಕ್ರಿಯೆಗೆ ನಡೆಸಿದಳು. ಆ ಹುಡುಗಿಯ ತಾಯಿ– ಮತ್ತು ಇತರ ಕುಟುಂಬಸ್ಥರೂ ಹೋಂ ಕ್ವಾರಂಟೈನ್‌ನಲ್ಲಿದ್ದರು. ನಾನು ಅವರಿಗೆ ಅಗತ್ಯ ನೆರವು ಒದಗಿಸಿದೆ. ಪಿಪಿಇ ಕಿಟ್‌ ಧರಿಸಿ ನಾನೂ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿ, ಸ್ಥೈರ್ಯ ತುಂಬಿದೆ. ಜೆ.ಸಿ.ನಗರದಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾದರು. ಅವರ ಅಂತ್ಯಕ್ರಿಯೆಗೂ ವ್ಯವಸ್ಥೆ ಮಾಡಿ, ನಾನೇ ಖುದ್ದಾಗಿ ಭಾಗವಹಿಸಿದೆ.

* ಕೋವಿಡ್‌ ಭಯದಿಂದ ಚಿಕಿತ್ಸೆ ಅಗತ್ಯ ಇರುವವರ ನೆರವಿಗೆ ಧಾವಿಸುವುದಕ್ಕೂ ಜನ ಹಿಂದೇಟು ಹಾಕುತ್ತಿದ್ದಾರಲ್ಲಾ?
ನಮ್ಮ ವಾರ್ಡ್‌ನಲ್ಲೂ ಇಂಥ ಘಟನೆ ನಡೆಯಿತು. ಮೂರ್ಛೆರೋಗ ಹೊಂದಿದ್ದ ವ್ಯಕ್ತಿಯೊಬ್ಬರು ರಸ್ತೆ ಬದಿ ಸುಮಾರು ಒಂದು ತಾಸು ಬಿದ್ದುಕೊಂಡಿದ್ದರು. ಜನ ಅವರನ್ನು ಮುಟ್ಟಲೂ ಹಿಂದೇಟು ಹಾಕುತ್ತಿದ್ದರು. ಬಳಿಕ ನಾನೇ ಆಟೊರಿಕ್ಷಾ ತರಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದೆ.

ಗರ್ಭಿಣಿಯೊಬ್ಬರಿಗೆ ಹೆರಿಗೆ ದಿನಾಂಕ ನಿಗದಿಯಾಗಿತ್ತು. ಅದರೆ, ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ಸಮಸ್ಯೆ ಎದುರಿಸಿದ್ದರು. ನನ್ನ ಕಾರಿನಲ್ಲಿ ಅವರನ್ನು ಕರೆದೊಯ್ದು ಶ್ರೀರಾಂಪುರದ ಆಸ್ಪತ್ರೆಗೆ ದಾಖಲಿಸಿದೆ. ಆ ಮಹಿಳೆಗೆ ನಿನ್ನೆ ಮಗುವಿಗೆ ಜನ್ಮ ನೀಡಿದ್ದಾರೆ. ಇಂತಹ ಕಾರ್ಯಗಳು ನಮ್ಮ ಮನಸ್ಸಿಗೂ ಸಮಾಧಾನ ತರುತ್ತವೆ.

* ಕೋವಿಡ್‌ ಪರೀಕ್ಷೆ ವಿಳಂಬವಾಗುತ್ತಿರುವುದು ನಿಜವೇ?
ಹೌದು. ಕೋವಿಡ್‌ ಪರೀಕ್ಷೆಗೆ ನಾಲ್ಕೈದು ದಿನ ತೆಗೆದುಕೊಂಡರೆ ಹೇಗೆ. ಅಷ್ಟರಲ್ಲಿ ಸುತ್ತಾಡಿ ಇನ್ನಷ್ಟು ಮಂದಿಗೆ ಪಸರಿಸುತ್ತಾರೆ. ದೃಢಪಟ್ಟ ಕೂಡಲೇ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯೂ ನಗರದಲ್ಲಿ ಅನೇಕ ಕಡೆ ಆಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಎಲ್ಲ ರೋಗಿಗಳಿಗೂ ಕೋವಿಡ್‌ ಪರೀಕ್ಷೆ ಕಡ್ಡಾಯ ಎನ್ನುತ್ತಿದ್ದಾರೆ. ಪರೀಕ್ಷೆ ಫಲಿತಾಂಶ ಅದೇ ದಿನ ಬರಲ್ಲ. ಯಾರದರೂ ಸತ್ತು ಅವರಿಗೆ ಕೋವಿಡ್‌ ದೃಢಪಟ್ಟರೆ ಅವರ ಹತ್ತಿರ ಯಾರೂ ಬರಲ್ಲ. ಸತ್ತವರ ಕೋವಿಡ್‌ ಪರೀಕ್ಷೆ ಫಲಿತಾಂಶವನ್ನೂ ವಿಳಂಬ ಮಾಡುವುದು ಎಷ್ಟು ಸರಿ.

* ಸರ್ಕಾರ ಬಡವರಿಗೆ ₹ 5ಸಾವಿರ ಪ್ಯಾಕೇಜ್‌ ಪ್ರಕಟಿಸಿದೆಯಲ್ಲಾ?
ಮನೆ ಕೆಲಸ ಮಾಡುವವರು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರು, ಸವಿತಾ ಸಮಾಜದವರು, ಆಟೊ ಚಾಲಕರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರ ಖಾತೆಗೆ ₹ 5ಸಾವಿರ ಹಾಕುತ್ತೇವೆ ಎಂದು ಸರ್ಕಾರ ಘೋಷಿಸಿದ್ದು ನಿಜ. ಆದರೆ, ಕೆಲವೇ ಕೆಲವರಿಗೆ ಮಾತ್ರ ಈ ಸವಲತ್ತು ಸಿಕ್ಕಿದೆ. ಜನ ಮಕ್ಕಳ ಶಾಲಾ ಶುಲ್ಕ ಕಟ್ಟಲೂ ಪರದಾಡುತ್ತಿದ್ದಾರೆ.

* ಕೊರೊನಾ ನಿಯಂತ್ರಣ ಕ್ರಮಗಳಿಗೆ ಬಿಬಿಎಂಪಿ ಮೆಚ್ಚುಗೆ ಗಳಿಸಿತ್ತಲ್ಲವೇ?
ಮೆಚ್ಚುಗೆಯ ಹಿಂದಿನ ಮರ್ಮ ಈಗ ಬೆಳಕಿಗೆ ಬರುತ್ತಿದೆ. ಬಿಐಇಸಿಯಲ್ಲಿ 10 ಸಾವಿರ ಹಾಸಿಗೆ ಸೌಕರ್ಯ ಒದಗಿಸಲು ನಿತ್ಯ ₹ 80 ಲಕ್ಷ ಬಾಡಿಗೆ ನೀಡಲು ಮುಂದಾಗಿದೆ. ತಿಂಗಳಿಗೆ ₹ 24 ಕೋಟಿಯನ್ನು ಇದಕ್ಕೆ ಖರ್ಚು ಮಾಡುವ ಬದಲು ಅದೇ ದುಡ್ಡಲ್ಲಿ ಸರ್ಕಾರದ ಆಸ್ಪತ್ರೆ ಅಭಿವೃದ್ಧಿಪಡಿಸಬಹುದಲ್ಲವೇ. ಕಿಟ್‌ ವಿತರಣೆ , ಸ್ಯಾನಿಟೈಸರ್‌, ಮಾಸ್ಕ್ ಖರೀದಿಯಲ್ಲೂ ಅವ್ಯವಹಾರ.

ಕಾರ್ಮಿಕ ವರ್ಗದವರಿಗೆ ಕಿಟ್‌ ಕೊಡುವುದರಲ್ಲೂ ದುಡ್ಡು ಮಾಡುವ ಪ್ರಯತ್ನ ನಡೆದಿದೆ. ಇದನ್ನೆಲ್ಲ ನೋಡಿಯೇ ನಮ್ಮ ಪಕ್ಷದ ನಾಯಕ ಸಿದ್ದರಾಮಯ್ಯ ಲೆಕ್ಕ ಕೊಡಿ ಎಂದು ಕೇಳಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಭ್ರಷ್ಟಾಚಾರಅವ್ಯವಹಾರ, ಹಗರಣ ನಡೆಸಿದರೆ ಭಗವಂತ ಮೆಚ್ಚುವುದಿಲ್ಲ. ಕೋವಿಡ್‌ ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದೇವೆ. ಅದರೆ, ಅನ್ಯಾಯ ಮುಂದುವರಿದರೆ ವಿರೋಧ ಪಕ್ಷವಾಗಿ ನಾವು ಇದರ ವಿರುದ್ಧ ಮುಂದೆ ಧ್ವನಿ ಎತ್ತುತ್ತೇವೆ.

ಪಾಲಿಕೆಯ ವಾರ್ಷಿಕ ಆದಾಯ ₹ 2500 ಕೋಟಿ ಮಾತ್ರ. ಆದರೆ, ಬಜೆಟ್‌ ₹ 10 ಸಾವಿರ ಕೋಟಿ ದಾಟುತ್ತಿದೆ. ಬಿಬಿಎಂಪಿ ಮೇಲೆ ₹ 25 ಸಾವಿರ ಕೋಟಿ ಹೊರೆ ಇದೆ. ಇನ್ನು ಎರಡು ತಿಂಗಳು ಕಳೆದರೆ ಅಧಿಕಾರಿಗಳಿಗೆ ಸಂಬಳ ಕೊಡಲಿಕ್ಕೂ ಬಿಬಿಎಂಪಿ ಬಳಿ ದುಡ್ಡಿಲ್ಲ. ಲಾಕ್‌ಡೌನ್‌ ಇದ್ದಾಗಲೂ ನಗರದ ಜನರು ₹1,200 ಕೋಟಿ ತೆರಿಗೆ ಕಟ್ಟಿದ್ದರು. ಆದರೂ ಕೋವಿಡ್ ಎದುರಿಸಲು ಏನೂ ಸಿದ್ಧತೆ ಮಾಡಿಕೊಂಡಿಲ್ಲ.

* ಬಿಬಿಎಂಪಿ ಇನ್ನು ಯಾವ ರೀತಿ ಪರಿಸ್ಥಿತಿ ನಿಭಾಯಿಸಬೇಕಿತ್ತು ಎಂದು ಬಯಸುತ್ತೀರಿ?
ದುಂದು ವೆಚ್ಚ ಮಾಡುವ ಸಂದರ್ಭ ಇದಲ್ಲ. ಸಂಪ‍ನ್ಮೂಲವನ್ನು ಆದಷ್ಟು ಮಿತವಾಗಿ ಬಳಸಬೇಕು. ದೊಡ್ಡ ಯೋಜನೆಗಳನ್ನು ಸ್ಥಗಿತಗೊಳಿಸಿ, ಜನರಿಗೆ ಏನು ಬೇಕೋ ಅದಕ್ಕೆ ಆದ್ಯತೆ ಕೊಡಬೇಕು. ಕಾಂಕ್ರೀಟ್‌ ಮೋರಿ, ಕಾಂಕ್ರೀಟ್‌ ರಸ್ತೆಯನ್ನು ಜನ ಈಗ ಕೇಳುತ್ತಿಲ್ಲ. ಅಗತ್ಯ ಇದ್ದಲ್ಲಿ ಮಾತ್ರ ಇಂತಹ ಕಾಮಗಾರಿ ನಡೆಸಬೇಕು. ಆರೋಗ್ಯ ಮೂಲಸೌಕರ್ಯಕ್ಕೆ, ರೋಗಿಗಳ ಊಟದ ವ್ಯವಸ್ಥೆಗೆ, ಔಷಧಿಗೆ ಆದ್ಯತೆ ನೀಡಬೇಕು.

* ಜನರಿಗೆ ಏನು ಹೇಳಲು ಬಯಸುತ್ತೀರಿ?
ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ, ಪೊಲೀಸರಿಗೆ, ಆಶಾ ಕಾರ್ಯಕರ್ತರಿಗೆ, ನಗರದ ಸ್ವಚ್ಛತೆ ಕಾಪಾಡುತ್ತಿರುವ ಪೌರಕಾರ್ಮಿಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಜಗತ್ತಿಗೇ ಬಂದ ಸಂಕಷ್ಟ ಇದು. ನಾವೆಲ್ಲ ಒಟ್ಟಾಗಿ ಆತ್ಮಸ್ಥೈರ್ಯದಿಂದ ಹೋರಾಟ ನಡೆಸಬೇಕು. ಪರಸ್ಪರ ಸಹಕಾರದಿಂದ ಕೊರೋನಾವನ್ನು ಮೆಟ್ಟಿ ನಿಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT