ಬೆಂಗಳೂರು: ಬಿಬಿಎಂಪಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಮಾಡಿರುವ ವೆಚ್ಚವನ್ನು ಹಿಂತಿರುಗಿಸಬೇಕು ಎಂದು ಪ್ರಾಧಿಕಾರವು ಬಿಬಿಎಂಪಿಯನ್ನು ಒತ್ತಾಯಿಸಿದೆ. ಇನ್ನೊಂದೆಡೆ, ‘ಬಿಡಿಎ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸುತ್ತಿರುವುದೇ ಬಿಬಿಎಂಪಿ’ ಎಂಬುದು ಪಾಲಿಕೆ ಸದಸ್ಯರ ವಾದ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ₹ 667 ಕೋಟಿಯನ್ನು ಮರುಪಾವತಿ ಮಾಡುವಂತೆ ಕೋರಿ ಬಿಬಿಎಂಪಿ ಆಯುಕ್ತರಿಗೆ ಬಿಡಿಎ ಆಯುಕ್ತರು ಜುಲೈ 31ರಂದು ಪತ್ರ ಬರೆದಿದ್ದಾರೆ. ಇದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಇನ್ನೊಂದೆಡೆ, ಬಿಬಿಎಂಪಿಯಲ್ಲಿ ಮಂಗಳವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಪಾಲಿಕೆ ಸದಸ್ಯರು ಬಿಡಿಎ ವಿರುದ್ಧ ಮುಗಿಬಿದ್ದರು. ‘ಬಡಾವಣೆಗಳನ್ನು ನಿರ್ಮಿಸುವ ಬಿಡಿಎ ಅಲ್ಲಿಗೆ ರಸ್ತೆ, ಕುಡಿಯುವ ನೀರು, ಬೀದಿ ದೀಪ ಮುಂತಾದ ಯಾವುದೇ ಮೂಲಸೌಕರ್ಯ ಕಲ್ಪಿಸದೆಯೇ ನಿವೇಶನದಾರರಿಂದ ತೆರಿಗೆ ಸಂಗ್ರಹಿಸುತ್ತದೆ. ಈ ಬಡಾವಣೆಗಳು ಪಾಲಿಕೆಗೆ ಹಸ್ತಾಂತರವಾದ ಬಳಿಕ ಮೂಲಸೌಕರ್ಯ ಒದಗಿಸುತ್ತಿರುವುದು ನಾವು. ಹಾಗಾಗಿ ಬಿಡಿಎ ಅಕ್ರಮ –ಸಕ್ರಮದ ಮೂಲಕ ಸಂಗ್ರಹಿಸಲು ಹೊರಟಿರುವ ದಂಡನಾ ಶುಲ್ಕವನ್ನು ಬಿಬಿಎಂಪಿಗೆ ನೀಡಬೇಕು’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ಮಂಜುನಾಥ ರೆಡ್ಡಿ ಮತ್ತು ಇತರ ಸದಸ್ಯರು ಒತ್ತಾಯಿಸಿದ್ದರು. ಇದಕ್ಕೆ ಇತರ ಸದಸ್ಯರೂ ದನಿಗೂಡಿಸಿದ್ದರು.
‘2008–09ನೇ ಸಾಲಿನ ಬಜೆಟ್ನಲ್ಲಿ ರಾಜ್ಯ ಸರ್ಕಾರವು ನಗರದ ಅಭಿವೃದ್ಧಿ ಸಲುವಾಗಿ ಬಿಬಿಎಂಪಿಗೆ ₹ 300 ಕೋಟಿ ಹಾಗೂ ಬಿಡಿಎಗೆ ₹ 700 ಕೋಟಿ ಹಂಚಿಕೆ ಮಾಡಿತ್ತು. ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ 2008ರ ಜೂನ್ 5ರಂದು ನಡೆದ ಸಭೆಯಲ್ಲಿ ಪಾಲಿಕೆಗೆ ಹೊಸದಾಗಿ ಸೇರಿದ 12 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1554 ಕಾಮಗಾರಿ ನಡೆಸಲು ತೀರ್ಮಾನಿಸಲಾಗಿತ್ತು.
ಬಿಡಿಎ ₹ 648.79 ಕೋಟಿ ವೆಚ್ಚದಲ್ಲಿ 1,548 ಕಾಮಗಾರಿಗಳಿಗೆ ಟೆಂಡರ್ ಕರೆದಿತ್ತು. ಅದರಲ್ಲಿ 1,536 ಕಾಮಗಾರಿಗಳು ಪೂರ್ಣವಾಗಿದ್ದು, ₹ 627.15 ಕೋಟಿ ವೆಚ್ಚವಾಗಿದೆ’ ಎಂದು ಬಿಡಿಎ ಆಯುಕ್ತ ಎಚ್.ಆರ್.ಮಹದೇವ್ ಅವರು ಪಾಲಿಕೆ ಆಯುಕ್ತರಿಗೆ ಪತ್ರದಲ್ಲಿ ವಿವರಿಸಿದ್ದಾರೆ.
‘2011ರ ಮಾರ್ಚ್ 13ರಂದು ಪತ್ರ ಬರೆದು ಈ ವೆಚ್ಚವನ್ನು ಹಿಂತಿರುಗಿಸುವಂತೆ ಸರ್ಕಾರವನ್ನು ಕೋರಲಾಗಿತ್ತು. ಆದರೆ, ನಮ್ಮ ಮನವಿಯನ್ನು ಪರಿಗಣಿಸಿಲ್ಲ. ಪ್ರಾಧಿಕಾರದ ಭಾರಿ ಕಾಮಗಾರಿಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಹಾಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ ಖರ್ಚುಮಾಡಿರುವ ₹ 627.15 ಕೋಟಿಯನ್ನು ಹಿಂತಿರುಗಿಸಬೇಕು’ ಎಂದು ಬಿಡಿಎ ಆಯುಕ್ತರು ಕೋರಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ‘ಬಿಡಿಎ ಆಯುಕ್ತರು ಪತ್ರದಲ್ಲಿ ಕೇಳಿರುವಂತೆ ₹ 627 ಕೋಟಿ ರೂಪಾಯಿ ಮರುಪಾವತಿ ಮಾಡಲು ಅವಕಾಶವೂ ಇಲ್ಲ, ನಮ್ಮಲ್ಲೂ ಇದಕ್ಕೆ ಸಂಪನ್ಮೂಲವೂ ಇಲ್ಲ. ಇಷ್ಟು ವರ್ಷ ತಡವಾಗಿ ಬಿಡಿಎ ಬಿಬಿಎಂಪಿಯಿಂದ ಏಕೆ ಹಣ ಕೇಳುತ್ತಿದೆಯೋ ಗೊತ್ತಿಲ್ಲ.’ ಎಂದು ಹೇಳಿದರು.
ಬಿಡಿಎ ಕಾಮಗಾರಿ: ಎಲ್ಲಿ, ಎಷ್ಟು ವೆಚ್ಚ?
ಕ್ಷೇತ್ರ; ಕಾಮಗಾರಿಗಳು; ವೆಚ್ಚ (₹ ಕೋಟಿ)
ಯಶವಂತಪುರ; 140; 49.18
ಆರ್.ಆರ್.ನಗರ; 64; 19.95
ಹೆಬ್ಬಾಳ; 46; 43.39
ಯಲಹಂಕ; 124; 28.25
ಕೆ.ಆರ್.ಪುರ; 113; 58.70
ಆನೇಕಲ್; 16; 9.21
ದಾಸರಹಳ್ಳಿ; 123; 48.77
ಮಹದೇವಪುರ; 71; 54.78
ಬೊಮ್ಮನಹಳ್ಳಿ; 96; 58.31
ಬೆಂಗಳೂರು ದಕ್ಷಿಣ; 109; 52.85
ಪದ್ಮನಾಭನಗರ; 49; 42.83
ಬ್ಯಾಟರಾಯನಪುರ; 152; 40.52
ವಿದ್ಯುಶ್ಚಕ್ತಿ ಕಾಮಗಾರಿ; 158; 32.41
ಕೆರೆ ಅಭಿವೃದ್ಧಿ; 275; 88.00
* ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಡಿಎ 2011ರಿಂದ 2014ರ ನಡುವೆ ಅನೇಕ ಕಾಮಗಾರಿಗಳನ್ನು ನಡೆಸಿದೆ. ಈ ಮೊತ್ತವನ್ನು ಭರಿಸುವಂತೆ ಬಿಬಿಎಂಪಿಯನ್ನು ಕೋರಿದ್ದೇವೆ. ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ
-ಎಚ್.ಆರ್.ಮಹದೇವ್, ಬಿಡಿಎ ಆಯುಕ್ತ
* ಬಿಬಿಎಂಪಿ ಕೂಡಾ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಇತರ ಸಂಸ್ಥೆಗಳಂತೆಯೇ ಒಂದು ಸಂಸ್ಥೆ. ಬಿಡಿಎ ಕೈಗೊಂಡ ಅಭಿವೃದ್ಧೀ ಕಾಮಗಾರಿಗಳಿಗೆ ಬಿಬಿಎಂಪಿ ಹಣ ಕೊಡಲು ಹೇಗೆ ಸಾಧ್ಯ?
–ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
₹ 789 ಕೋಟಿ ಬಿಲ್ ಬಾಕಿ?
‘2020–21ನೇ ಸಾಲಿನಲ್ಲಿ ಬಿಡಿಎ ₹ 3,139.83 ಕೋಟಿ ವೆಚ್ಚದ 43 ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದೆ. ₹789.71 ಕೋಟಿ ಮೊತ್ತದ ಬಿಲ್ಗಳು ಪಾವತಿಗೆ ಬಾಕಿ ಇವೆ. ಅರ್ಕಾವತಿ, ನಾಡಪ್ರಭು ಕೆಂಪೇಗೌಡ ಬಡಾವಣೆಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಬಿಲ್ ಪಾವತಿಸದಿದ್ದಲ್ಲಿ ಕಾಮಗಾರಿಗಳು ಕುಂಠಿತವಾಗುವ ಸಂಭವವಿದೆ’ ಎಂದು ಬಿಡಿಎ ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.