ಮೈಸೂರು: ಮೃಗಾಲಯದ ಪ್ರಾಣಿಗಳಿಗೆ ದನದ ಮಾಂಸ ಪೂರೈಸಲು ಸರ್ಕಾರದಿಂದ ವಿಶೇಷ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಭಾನುವಾರ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಮೃಗಾಲಯಗಳಿಗೆ ದನದ ಮಾಂಸ ಪೂರೈಸಲು ಅನುಮತಿ ನೀಡಬೇಕೆಂದು ಮೃಗಾಲಯ ಪ್ರಾಧಿಕಾರದವರು ಕೇಳಿದ್ದಾರೆ. ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.
ರಾಜ್ಯ ಸರ್ಕಾರವು ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿರುವುದರಿಂದ ಮೃಗಾಲಯಗಳಿಗೆ ದನದ ಮಾಂಸ ಪೂರೈಕೆ ಸ್ಥಗಿತಗೊಂಡಿದೆ. ಹುಲಿ, ಸಿಂಹ ಒಳಗೊಂಡಂತೆ ಮಾಂಸಾಹಾರಿ ಪ್ರಾಣಿಗಳಿಗೆ ಕೋಳಿ ಮಾಂಸ ನೀಡಲಾಗುತ್ತಿದೆ.